ಜಲಂಧರ್: ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರಳ ಬಹುಮತ ಬಾರದು ಎಂದು ಬಿಜೆಪಿಯ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳದ ಮುಖಂಡ ನರೇಶ್ ಗುಜ್ರಾಲ್ ಹೇಳಿದ್ದಾರೆ.
ಮುಂದಿನ ಅವಧಿಗೆ ಪ್ರಧಾನಿಯಾಗುವವರು ಎಲ್ಲರನ್ನೂ ಜತೆಗೆ ಕರೆದೊಯ್ಯಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಬಿಜೆಪಿಗೆ ಬಹುಮತ ದೊರೆಯದಿದ್ದರೂ ಎನ್ಡಿಎ ಅಧಿಕಾರ ಉಳಿಸಿಕೊಳ್ಳಬಹುದು ಎಂದು ಅವರು ಭವಿಷ್ಯ ಹೇಳಿದ್ದಾರೆ.
ಬಿಜೆಪಿಗೆ ಸರಳ ಬಹುಮತ ದೊರೆಯದಿದ್ದರೆ ಪ್ರಧಾನಿ ಯಾರಾಗಬಹುದು ಎಂಬ ಪ್ರಶ್ನೆಗೆ, ಅದು ಎನ್ಡಿಎ ನೇತೃತ್ವ ವಹಿಸಿರುವ ಬಿಜೆಪಿಯ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.
ಬಿಜೆಪಿ ಯಾರನ್ನು ಆಯ್ಕೆ ಮಾಡಿದರೂ ತಮ್ಮ ಪಕ್ಷಕ್ಕೆ ಸಮಸ್ಯೆ ಇಲ್ಲ. ಆದರೆ, ಮಿತ್ರ ಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಡಬೇಕಾಗುತ್ತದೆ. ಅದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅಗತ್ಯವೂ ಹೌದು ಎಂದು ಅವರು ಹೇಳಿದ್ದಾರೆ.