ಲಖನೌ:‘ಹನುಮಾನ್ ದಲಿತನಾಗಿದ್ದ ಮತ್ತು ಅವನು ಮನುವಾದಿ ಜನರ ಗುಲಾಮನಾಗಿದ್ದ’ ಎಂದುಬಹರಾಯಿಚ್ನ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ ಹೇಳಿದ್ದಾರೆ.
ಹನುಮಾನ್ ದಲಿತನಾಗಿದ್ದ ಎಂದು ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾತಿಗೆ ಧ್ವನಿಗೂಡಿಸಿರುವ ಅವರು, ‘ದಲಿತರು ಹಾಗೂ ಹಿಂದುಳಿದ ವರ್ಗದವರನ್ನು ಕೋತಿಗಳು ಮತ್ತು ರಾಕ್ಷಸರು ಎಂದು ಕರೆಯಲಾಗುತ್ತಿತ್ತು’ ಎಂದೂ ಹೇಳಿದ್ದಾರೆ.
‘ಶ್ರೀರಾಮನಿಗಾಗಿ ಹನುಮಾನ್ ಎಲ್ಲ ಸೇವೆಯನ್ನೂ ಮಾಡಿದ. ಆದರೂ, ಅವನನ್ನು ಏಕೆ ವಾನರನನ್ನಾಗಿ ಮಾಡಲಾಯಿತು. ಅವನಿಗೇಕೆ ಬಾಲ ಇತ್ತು ಮತ್ತು ಅವನ ಮುಖವೇಕೆ ಕಪ್ಪಾಗಿತ್ತು’ ಎಂದು ಅವರು ಪ್ರಶ್ನಿಸಿದ್ದಾರೆ.
‘ರಾಮನಿಗೆ ಅಷ್ಟು ಭಕ್ತಿಯಿಂದ ಸೇವೆ ಸಲ್ಲಿಸಿದ್ದಕ್ಕೆ ಹನುಮಾನ್ನನ್ನು ವಾನರನ ಬದಲು ನರನನ್ನಾಗಿ ಮಾಡಬೇಕಿತ್ತು. ಹನುಮಾನ್ ದಲಿತನಾಗಿದ್ದ ಕಾರಣ ಆಗಲೂ ಅವಮಾನ ಎದುರಿಸಿದ್ದಂತೆ ಕಾಣುತ್ತದೆ. ದಲಿತರನ್ನೂ ಮನುಷ್ಯರಂತೆ ನಾವೇಕೆ ಪರಿಗಣಿಸುತ್ತಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.