ನಾಂದೇಡ್: ಮಹಾರಾಷ್ಟ್ರದ ಪಾಲ್ಗರ್ನಲ್ಲಿ ಇಬ್ಬರು ಸಾಧುಗಳನ್ನು ಹೊಡೆದು ಕೊಂದ ಘಟನೆ ಹಸಿರಾಗಿರುವಾಗಲೇ ನಾಂದೇಡ್ ಜಿಲ್ಲೆಯ ಆಶ್ರಮವೊಂದರಲ್ಲಿ ಸಾಧುವೊಬ್ಬರನ್ನು ಕೊಲೆ ಮಾಡಲಾಗಿದೆ.
A sadhu's body was found at his Ashram in Nanded's Umri late last night: Vijaykumar Magar, Superintendent Of Police, Nanded. More details awaited. #Maharashtra
ಕರ್ನಾಟಕ ಮೂಲದ ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ ಕೊಲೆಯಾದವರು. ಇವರು ಕರ್ನಾಟಕ ಮೂಲದವರು ಎಂದು ಹೇಳಲಾಗಿದೆ. ಸಾಧು ಕೊಲೆ ನಡೆದ ಆಶ್ರಮದ ಶೌಚಾಲಯದಲ್ಲಿ ಮತ್ತೊಬ್ಬ ವ್ಯಕ್ತಿಯೂ ಹತ್ಯೆಗೀಡಾಗಿದ್ದಾನೆ.
‘ಕೊಲೆಯಾದ ಸಾಧು ಮತ್ತು ಆರೋಪಿಗಳಿಬ್ಬರೂ ಒಂದೇ ಸಮುದಾಯದವರು. ಪ್ರಕರಣಕ್ಕೆ ಧರ್ಮದ ಹಿನ್ನೆಲೆ ಇಲ್ಲ. ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ,’ ಎಂದು ಎಸ್ಪಿ ವಿಜಯ್ ಕುಮಾರ್ ಮಾಗರ್ ತಿಳಿಸಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
‘ಯುವಕನೊಬ್ಬ ಆಶ್ರಮದಲ್ಲಿ ಲೂಟಿ ಮಾಡುವ ವೇಳೆ ಎರಡೂ ಹತ್ಯೆಗಳನ್ನು ನಡೆಸಿದ್ದಾನೆ,’ ಎಂದು ಮಹಾರಾಷ್ಟ್ರದ ಸುದ್ದಿ ವಾಹಿನಿಗಳು ವರದಿ ಮಾಡಿವೆ.
ಮಹಾರಾಷ್ಟ್ರದ ಪಾಲ್ಗರ್ನಲ್ಲಿ ಏ.19ರ ರಾತ್ರಿ ಇಬ್ಬರು ಸಾಧುಗಳನ್ನು ಮಕ್ಕಳ ಕಳ್ಳರೆಂದು ಭಾವಿಸಿ ಸ್ಥಳೀಯರೇ ಹೊಡೆದುಕೊಂದಿದ್ದರು. ಪೊಲೀಸರ ಕಣ್ಣೆದುರೇ ನಡೆದಿದ್ದ ಈ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಘಟನೆ ರಾಜಕೀಯದ ಆಯಾಮ ಪಡೆದುಕೊಂಡಿತ್ತು. ಕೊಲೆಗೆ ಸಂಬಂಧಿಸಿದಂತೆ 101ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಮತ್ತೂ ಐವರನ್ನು ಬಂಧಿಸಲಾಗಿತ್ತು. ಹೀಗಿರುವಾಗಲೇ ಮತ್ತೊಬ್ಬ ಸಾಧುವಿನ ಹತ್ಯೆ ನಡೆದಿದೆ.