ಕೋಲ್ಕತ್ತ: ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಸಿಬಿಐ ಭಾನುವಾರ ಬಂಧಿಸಲು ಮುಂದಾದುದನ್ನು ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದರು. ಮಂಗಳವಾರ ಕೇಂದ್ರದ ವಿರುದ್ಧದ ಧರಣಿಯನ್ನು ಅಂತ್ಯಗೊಳಿಸಿದರು.
ಮುಂದಿನ ವಾರ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸುವುದಾಗಿ ಮಮತಾ ಘೋಷಿಸಿದರು.
’ಸಂವಿಧಾನ ಉಳಿಸಿ’ ಧರಣಿಯು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಹೀಗಾಗಿ ಇವತ್ತಿಗೆ ಈ ಧರಣಿಯನ್ನುಅಂತ್ಯಗೊಳಿಸೋಣ ಎಂದರು. ಧರಣಿ ಪ್ರಾರಂಭಿಸುತ್ತಿದ್ದಂತೆ ನಾವು ಎಲ್ಲ ಪಕ್ಷಗಳನ್ನು ಸಂಪರ್ಕಿಸಿದೆವು ಹಾಗೂ ಎಲ್ಲರೂ ಬೆಂಬಲ ವ್ಯಕ್ತಪಡಿಸಿದರು ಎಂದು ಮಮತಾ ಹೇಳಿದರು.
ಧರಣಿಯಲ್ಲಿ ಭಾಗಿಯಾದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮಾತನಾಡಿ, ’ಇಂಥ ಕಿರುಕುಳವನ್ನು ನಿಲ್ಲಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಇದು ಇಲ್ಲಿಗೇ ಮುಗಿದಿಲ್ಲ. ಎನ್ಡಿಎ ಸರ್ಕಾರ ದೇಶವನ್ನು ಇಬ್ಬಾಗ ಮಾಡಲು ಹವಣಿಸುತ್ತಿದೆ, ನಾನು ದೇಶವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದರು.