ಮಾಲಿನ್ಯಕಾರಿ ಕಾರ್ಖಾನೆಗಳ ಮೂರು ತಿಂಗಳಲ್ಲಿ ಮುಚ್ಚಿಸಿ

ನವದೆಹಲಿ: ದೇಶದೆಲ್ಲೆಡೆ ‘ತೀವ್ರವಾಗಿ ಕಲುಷಿತಗೊಂಡಿರುವ’ ಪ್ರದೇಶಗಳಲ್ಲಿ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳನ್ನು ಮೂರು ತಿಂಗಳ ಒಳಗಾಗಿ ಮುಚ್ಚಿಸಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ನಿರ್ದೇಶನ ನೀಡಿದೆ.
ಸಾರ್ವಜನಿಕರ ಆರೋಗ್ಯ ಕಡೆಗಣಿಸಿ ಆರ್ಥಿಕ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವುದು ಸರಿಯಲ್ಲ ಎಂದು ಎನ್ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಮೂರು ತಿಂಗಳ ಬಳಿಕ ಆದೇಶ ಪರಿಪಾಲನೆ ಕುರಿತು ವರದಿ ಸಲ್ಲಿಸಬೇಕು ಎಂದು ಸಿಪಿಸಿಬಿಗೆ ಸೂಚಿಸಿರುವ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 5ಕ್ಕೆ ನಿಗದಿಪಡಿಸಿದೆ.
ಸಿಪಿಸಿಬಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು 2009–10ರಲ್ಲಿ ನಡೆಸಿದ್ದ ಜಂಟಿ ಅಧ್ಯಯನ ವರದಿ ಆಧಾರದ ಮೇಲೆ, ಕೈಗಾರಿಕಾ ಸಮೂಹಗಳಿರುವ ಪ್ರದೇಶವನ್ನು ‘ಕಲುಷಿತ ಕೈಗಾರಿಕಾ ಪ್ರದೇಶ’ ಎಂದು ಗುರುತಿಸಲಾಗಿತ್ತು. ಬಳಿಕ ಇವುಗಳನ್ನು ‘ಗಂಭೀರವಾಗಿ ಕಲುಷಿತಗೊಂಡಿರುವ ಪ್ರದೇಶ (ಸಿಪಿಎ)’, ‘ತೀವ್ರವಾಗಿ ಕಲುಷಿತಗೊಂಡಿರುವ ಪ್ರದೇಶ (ಎಸ್ಪಿಎ)’ ಹಾಗೂ ‘ಇತರೆ ಕಲುಷಿತ ಪ್ರದೇಶ (ಒಪಿಎ)’ ಎಂದು ವರ್ಗೀಕರಿಸಲಾಗಿತ್ತು.
ಐದು ವರ್ಷಗಳಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಉಂಟಾದ ಹಾನಿಗೆ ಪರಿಹಾರ ರೂಪದಲ್ಲಿ, ಮಾಲಿನ್ಯಕಾರಕ ಕಾರ್ಖಾನೆಗಳಿಂದ ಎಷ್ಟು ಮೊತ್ತ ಸಂಗ್ರಹಿಸಬೇಕು ಎಂದು ಲೆಕ್ಕ ಹಾಕುವಂತೆ ಸಿಪಿಸಿಬಿಗೆ ಸೂಚಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.