ಅಹಮದಾಬಾದ್/ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದ ಜನರು ಅಶ್ಲೀಲ ಚಲನಚಿತ್ರ ನೋಡುವ ಸಲುವಾಗಿ ಇಂಟರ್ನೆಟ್ ಬಳಸುತ್ತಾರೆ. ಹೀಗಾಗಿ ಇಂಟರ್ನೆಟ್ ಸೇವೆ ಸ್ಥಗಿತದಿಂದ ಕಣಿವೆ ರಾಜ್ಯದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮವಾಗಿಲ್ಲ’ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಸಾರಸ್ವತ್ ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ, ‘ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ಹೇಳಿಕೆಯಿಂದ ಜಮ್ಮು–ಕಾಶ್ಮೀರದ ಜನತೆಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ಅವರು ಭಾನುವಾರ ಹೇಳಿದ್ದಾರೆ.
ಗುಜರಾತ್ನ ಗಾಂಧಿನಗರದಲ್ಲಿ ಧೀರೂಬಾಯಿ ಅಂಬಾನಿ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಆ್ಯಂಡ್ ಕಮ್ಯುನಿಕೇಶನ್ ಟೆಕ್ನಾಲಜಿಯ ಘಟಿಕೋತ್ಸವದಲ್ಲಿ ಶನಿವಾರ ಅವರು ಪಾಲ್ಗೊಂಡಿದ್ದರು.
‘ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಐದು ತಿಂಗಳು ಗತಿಸಿದ್ದು, ಈಗಲೂ ಇಂಟರ್ನೆಟ್ ಸೇವೆಯನ್ನು ಪುನರಾರಂಭಿಸಿಲ್ಲ ಏಕೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ ಅವರು ಈ ರೀತಿ ಹೇಳಿದ್ದರು.
‘ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಇಂತಹ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಅಧ್ಯಕ್ಷ ಶೇಖ್ ಆಶಿಕ್ ಹೇಳಿದ್ದಾರೆ.
‘ಕಣಿವೆ ರಾಜ್ಯದ ಬಗ್ಗೆ ಕೀಳಾಗಿ ಮಾತನಾಡಿರುವ ಸಾರಸ್ವತ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಜಮ್ಮು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಜೆಸಿಸಿಐ) ಅಧ್ಯಕ್ಷ ರಾಕೇಶ್ ಗುಪ್ತಾ ಆಗ್ರಹಿಸಿದ್ದಾರೆ.
‘ಸಾರಸ್ವತ್ ಮೊದಲು ಭಾರತದ ಸಂವಿಧಾನವನ್ನು ಅಧ್ಯಯನ ಮಾಡುವುದು ಸೂಕ್ತ’ ಎಂದು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಟ್ವೀಟ್ ಮಾಡಿದ್ದಾರೆ.