ನವದೆಹಲಿ: ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಸುದ್ದಿ ಸಂಸ್ಥೆ ಪಿಟಿಐ 'ದೇಶ ವಿರೋಧಿ' ವರದಿಗಾರಿಕೆ ಮಾಡಿದೆ ಎಂದು ಆರೋಪಿಸಿರುವ ಪ್ರಸಾರ ಭಾರತಿ, ಪಿಟಿಐ ಜತೆಗಿನ ಎಲ್ಲ ವ್ಯವಹಾರಗಳನ್ನು ಕಡಿದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಪಿಟಿಐ ಜತೆಗಿನ ಸಂಬಂಧದ ಬಗ್ಗೆ ಅವಲೋಕನ ನಡೆಸಿ ಮುಂದುವರಿಯಬೇಕೇ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಸಾರಭಾರತಿ ಪಿಟಿಐಗೆ ಪತ್ರ ಬರೆದಿದೆ ಎಂದು ಮೂಲಗಳು ಹೇಳಿವೆ.
ಪಿಟಿಐ ಸುದ್ದಿ ಸಂಸ್ಥೆ ಗುರುವಾರ ಚೀನಾದ ರಾಯಭಾರಿ ಸನ್ ವೀಡಾಂಗ್ ಮತ್ತು ಶುಕ್ರವಾರ ಬೀಜಿಂಗ್ನಲ್ಲಿ ಭಾರತೀಯ ರಾಯಭಾರಿ ಆಗಿರುವ ವಿಕ್ರಂ ಮಿಸ್ತ್ರಿ ಅವರ ಸಂದರ್ಶನ ನಡೆಸಿತ್ತು. ಈ ಸಂದರ್ಶನದ ಬಗ್ಗೆ ಪ್ರಸಾರ ಭಾರತಿ ಅಸಮಾಧಾನ ವ್ಯಕ್ತಪಡಿಸಿದೆ.
ನೈಜ ನಿಯಂತ್ರಣ ರೇಖೆ (ಎಲ್ಎಸಿ)ಯಿಂದ ಚೀನಾ ಪಡೆ ಹಿಂದೆ ಸರಿಯಬೇಕು ಎಂಬ ಮಿಸ್ತ್ರಿ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ಶುಕ್ರವಾರ ರಾತ್ರಿ ಟ್ವೀಟ್ ಮಾಡಿತ್ತು. ಏತನ್ಮಧ್ಯೆ, ಗಡಿಭಾಗವನ್ನು ಯಾರೂ ಅತಿಕ್ರಮಿಸಿಕೊಂಡಿಲ್ಲ ಎಂದು ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ ಹೇಳಿದ್ದು, ಇದಕ್ಕೆವ್ಯತಿರಿಕ್ತವಾಗಿ ಭಾರತೀಯ ರಾಯಭಾರಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಚೀನಾ ತಮ್ಮ ಜವಾಬ್ದಾರಿಯನ್ನು ಅರಿತು ಎಲ್ಎಸಿಯಿಂದ ಹಿಂದೆ ಸರಿಯಲಿದೆ ಎಂಬ ಮಿಸ್ತ್ರಿ ಅವರ ಮಾತು ಶುಕ್ರವಾರ ರಾತ್ರಿ 10.45ಕ್ಕೆ ಪ್ರಕಟವಾದ ಪಿಟಿಐ ಸುದ್ದಿಯಲ್ಲಿ ಇರಲಿಲ್ಲ.
India hopes China will realise its responsibility in de-escalation and disengaging by moving back to its side of LAC: Indian envoy to China
— Press Trust of India (@PTI_News) June 26, 2020
ಶುಕ್ರವಾರ ರಾತ್ರಿ 8.03 ಮತ್ತು 9.10ರ ನಡುವೆ ಸಂದರ್ಶನದ ಬಗ್ಗೆ ಪಿಟಿಐ 11 ಸುದ್ದಿ ತುಣುಕುಗಳನ್ನು ಪ್ರಸಾರ ಮಾಡಿತ್ತು.
ಆದಾಗ್ಯೂ, ಚೀನಾ ರಾಯಭಾರ ಕಚೇರಿಯು ಆ ಸಂದರ್ಶನವನ್ನು ಟ್ವೀಟ್ ಮಾಡಿದ ನಂತರ ಪಿಟಿಐ ವಿರುದ್ಧ ಟೀಕಾಪ್ರಹಾರ ನಡೆದಿದೆ.
Gave interview to PTI on #GalwanValley Incident. Onus is not on #China. We are willing & able to properly manage differences. Mutual respect&support is sure way. Suspicion&friction is wrong path. Will jointly uphold peace&stability in border areas, ensure sound&steady relations.
— Sun Weidong (@China_Amb_India) June 25, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.