ಭೋಪಾಲ್:ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ಜೋತಿರಾಧಿತ್ಯ ಸಿಂಧ್ಯಾ ಅವರು ಕಾಂಗ್ರೆಸ್ ಹಿರಿಯ ನಾಯಕ ಕಮಲ್ ನಾಥ್ ಹೆಸರನ್ನು ಪ್ರಸ್ತಾಪಿಸಿದ್ದಾರೆ.ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಜತೆ ಸಭೆ ನಡೆಸಿ ಸಿಂಧ್ಯಾ ಈ ಪ್ರಸ್ತಾವ ಮುಂದಿಟ್ಟಿದ್ದಾರೆ.ಮಧ್ಯಪ್ರದೇಶದ ಮುಖ್ಯಮಂತ್ರಿ ಯಾರು ಆಗುತ್ತಾರೆ ಎಂಬುದರ ಬಗ್ಗೆ ಬುಧವಾರ ರಾತ್ರಿ 9 ಗಂಟೆಗೆ ಅಧಿಕೃತ ಘೋಷಣೆ ನಡೆಯಲಿದೆ ಎಂದು ಸಿಎನ್ಎನ್ - ನ್ಯೂಸ್ 18 ವರದಿ ಮಾಡಿದೆ.
ಎಎನ್ಐ ಸುದ್ದಿಸಂಸ್ಥೆ ಪ್ರಕಾರ ಭೋಪಾಲ್ನಲ್ಲಿ ನಡೆದ ಸಿಎಲ್ಪಿ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ಹೆಸರು ಸೂಚಿಸಿದ್ದು, ಈ ಬಗ್ಗೆ ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ.
ಎಐಸಿಸಿ ಹಿರಿಯ ನಾಯಕ ಎಕೆ ಆ್ಯಂಟನಿ ಅವರು ಇಂದು ಭೋಪಾಲ್ನಿಂದ ದೆಹಲಿಗೆ ಬರಲಿದ್ದು, ಮಧ್ಯಪ್ರದೇಶದ ಮುಖ್ಯಮಂತ್ರಿಯ ಆಯ್ಕೆ ಬಗ್ಗೆ ರಾಹುಲ್ ಗಾಂಧಿ ಜತೆ ಮಾತನಾಡಲಿದ್ದಾರೆ.ಮೂಲಗಳ ಪ್ರಕಾರ ಸಿಎಲ್ಪಿ ಸಭೆಯಲ್ಲಿ ಹೆಚ್ಚಿನ ಶಾಸಕರು ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ಹೆಸರನ್ನು ಅನುಮೋದಿಸಿದ್ದಾರೆ.