ನವದೆಹಲಿ:ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ವರ್ಗಗಳನ್ನು ಗುರುತಿಸುವ ಮಾನದಂಡ ನಿಗದಿ ಪಡಿಸಲು ರಾಜ್ಯಗಳಿಗೆ ಮುಕ್ತ ಅವಕಾಶವಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಸಂವಿಧಾನದ 124ನೇ ತಿದ್ದುಪಡಿ ಮಸೂದೆ–2019 ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ, ‘ಮೀಸಲಾತಿಗೆ ಮಾನದಂಡ ನಿಗದಿಪಡಿಸಲು ಸಂವಿಧಾನವು ರಾಜ್ಯಗಳಿಗೆ ಅಧಿಕಾರ ನೀಡಿದೆ’ ಎಂದು ಅವರು ಹೇಳಿದರು.
ಈ ಮೀಸಲಾತಿ ಪಡೆಯಲು ₹8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು. ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರಬಾರದು ಎಂದು ಸೋಮವಾರ ನಡೆದಿದ್ದ ಕೇಂದ್ರ ಸಂಪುಟ ಸಭೆಯಲ್ಲಿ ನಿಗದಿಪಡಿಸಲಾಗಿತ್ತು.
ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ₹5 ಲಕ್ಷ ವಾರ್ಷಿಕ ಆದಾಯ ಮೀರಿರಬಾರದು ಎಂದು ರಾಜ್ಯಗಳು ಮಾನದಂಡ ರೂಪಿಸಬಹುದು. ಈ ಮೀಸಲಾತಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಕ್ಕೆ ಅನ್ವಯಿಸುತ್ತದೆ ಎಂದು ಪ್ರಸಾದ್ ಹೇಳಿದರು.
ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಸೂದೆ ಮಂಡಿಸಲಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದವು.‘ಹೌದು ನಮ್ಮಿಂದ ತಡವಾಗಿರಬಹುದು, ಆದರೆ,ಈ ಮಸೂದೆ ಮಂಡಿಸಲು ನಾವು ಧೈರ್ಯ ಮಾಡಿದ್ದೇವೆ’ ಎಂದು ಸಚಿವರು ತಿರುಗೇಟು ನೀಡಿದರು.