ಭೋಪಾಲ್: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ ಚೌಹಾಣ್ ಅವರಿಗೆ ಇದು ನಾಲ್ಕನೇ ಅವಧಿ.
ಕಮಲನಾಥ್ ನೇತೃತ್ವದ 15 ತಿಂಗಳ ಅವಧಿಯ ಸರ್ಕಾರವನ್ನು ಪತನಗೊಳಿಸಿದ ಕೆಲವೇ ದಿನಗಳಲ್ಲಿ, ಬಿಜೆಪಿ ಸರ್ಕಾರ ರಚಿಸಿದೆ.
ಮಧ್ಯಪ್ರದೇಶ ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು 22 ಶಾಸಕರು ರಾಜೀನಾಮೆ ನೀಡಿದ ಕಾರಣ, ಕಾಂಗ್ರೆಸ್ ಸರ್ಕಾರವು ಬಹುಮತ ಕಳೆದುಕೊಂಡಿತ್ತು. ಈ ಶಾಸಕರು ಬೆಂಗಳೂರಿನ ಹೋಟೆಲ್ ಒಂದರಲ್ಲಿ ಉಳಿದುಕೊಂಡು, ಅಲ್ಲಿಂದಲೇ ರಾಜೀನಾಮೆ ಸಲ್ಲಿಸಿದ್ದರು.
ಮಧ್ಯಪ್ರದೇಶ ರಾಜ್ಯಪಾಲರು, ಮಾರ್ಚ್ 17ರಂದು ಬಹುಮತ ಸಾಬೀತು ಮಾಡುವಂತೆ ಕಮಲನಾಥ್ ಅವರಿಗೆ ಸೂಚಿಸಿದ್ದರು. ಆದರೆ, ಕೊರೊನಾವೈರಸ್ ಕಾರಣ ಸ್ಪೀಕರ್ ಅವರು ಸದನವನ್ನು ಮುಂದೂಡಿದ್ದರು. ಇದರ ವಿರುದ್ಧ ಬಿಜೆಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಮಾರ್ಚ್ 19ರ ಸಂಜೆ 5ರ ಒಳಗೆ ಬಹುಮತ ಸಾಬೀತು ಮಾಡಿ ಎಂದು ಕಮಲನಾಥ್ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಗಡುವು ಮುಗಿಯುವ ಮುನ್ನವೇ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್ಗೆ ತೊರೆದಿದ್ದ 22 ಶಾಸಕರು ನಂತರದ ದಿನಗಳಲ್ಲಿ ಬಿಜೆಪಿ ಸೇರಿದ್ದಾರೆ.