ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಗೆ ನಡೆಯುತ್ತಿರುವ ಸಿದ್ಧತೆಗಳು ‘ಗುಲಾಮರ ಮನಸ್ಥಿತಿ’ಯನ್ನು ಬಿಂಬಿಸುವಂತಿವೆಎಂದು ಶಿವಸೇನಾ ಟೀಕಿಸಿದೆ.
‘ಟ್ರಂಪ್ ಅವರ ಭಾರತ ಪ್ರವಾಸಕ್ಕೆ ನಡೆಯುತ್ತಿರುವ ಸಿದ್ಧತೆಗಳು ‘ಚಕ್ರವರ್ತಿ’ಯೊಬ್ಬ ಭೇಟಿ ನೀಡಿದಾಗ ಕೈಗೊಳ್ಳುವ ಸಿದ್ಧತೆಯ ಸ್ವರೂಪದಲ್ಲಿದೆ’ ಎಂದು ಸೇನಾ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಅಹಮದಾಬಾದ್ನ ಕೊಳೆಗೇರಿಗಳಿಗೆ ಅಡ್ಡಲಾಗಿ ದೊಡ್ಡ ಗೋಡೆಗಳನ್ನು ನಿರ್ಮಿಸುತ್ತಿರುವ ಬಗ್ಗೆ ಪತ್ರಿಕೆ ಆಕ್ಷೇಪ ವ್ಯಕ್ತಪಡಿಸಿದೆ. ‘ರೂಪಾಯಿ ಮೌಲ್ಯ ಕುಸಿತವನ್ನು ಟ್ರಂಪ್ ಭೇಟಿ ತಡೆಯದು. ಗೋಡೆ ಕಟ್ಟಲಾಗುತ್ತಿರುವ ಕೊಳೆಗೇರಿ ನಿವಾಸಿಗಳ ಸ್ಥಿತಿಯೂ ಬದಲಾಗದು’ ಎಂದು ಬರೆಯಲಾಗಿದೆ.
‘ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನ, ಬ್ರಿಟನ್ ರಾಜ ಅಥವಾ ರಾಣಿಯು ಭಾರತದಂತಹ ಗುಲಾಮ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದರು. ಇದೇ ರೀತಿ ಟ್ರಂಪ್ ಅವರ ಭೇಟಿಗೆ ಭಾರತದ ತೆರಿಗೆದಾರರ ಹಣವನ್ನು ಸರ್ಕಾರ ವಿನಿಯೋಗಿಸುತ್ತಿದೆ. ಇದು ಗುಲಾಮಿ ಮನಸ್ಥಿತಿಯನ್ನು ಬಿಂಬಿಸುತ್ತದೆ’ ಎಂದು ಆರೋಪಿಸಲಾಗಿದೆ.