ತಿರುಮಲ: ಕೋವಿಡ್ -19 ಸೋಂಕು ಹರಡುತ್ತಿರುವ ಈ ಹೊತ್ತಲ್ಲಿ ತಿರುಮಲ ಪರಿಸರವನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕ ಸಿಂಪಡಿಸುವ ಸ್ಪ್ರೇಯರ್ನ್ನು ಮುಸ್ಲಿಂ ಭಕ್ತರೊಬ್ಬರು ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ಗೆ ಕೊಡುಗೆಯಾಗಿ ನೀಡಿದ್ದಾರೆ.
ತಿರುಪತಿ ವೆಂಕಟೇಶ್ವರನ ಭಕ್ತರಾಗಿರುವ ಚೆನ್ನೈ ಮೂಲದ ಉದ್ಯಮಿ ಅಬ್ದುಲ್ ಘನಿ ಎಂಬವರು ₹2.6 ಲಕ್ಷ ಮೌಲ್ಯದ ಸ್ಪ್ರೇಯರ್ನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಟ್ರ್ಯಾಕ್ಟರ್ನಲ್ಲಿರಿಸಿ ಸಿಂಪಡಣೆ ಮಾಡುವ ಈ ಸ್ಪ್ರೇಯರ್ನಿಂದಮಡಾ ರಸ್ತೆಯ ಸುತ್ತಮುತ್ತಲ ಪ್ರದೇಶವನ್ನು ವೈರಾಣು ಮುಕ್ತ ಮಾಡಲಾಗುತ್ತಿದೆ.
ಘನಿ ಅವರು ಈ ಹಿಂದೆಯೂ ಇದೇ ರೀತಿಯ ಕೊಡುಗೆ ನೀಡಿದ್ದರು. ನಾಲ್ಕು ವರ್ಷಗಳ ಹಿಂದೆ ಇವರು ಟಿಟಿಡಿಯ ನಿತ್ಯ ಅನ್ನದಾನ (ಉಚಿತ ಊಟ) ಸೇವೆಗೆ ತರಕಾರಿಗಳನ್ನು ಕೊಂಡೊಯ್ಯಲು ಹವಾನಿಯಂತ್ರಿತ ಟ್ರಕ್ಗಳನ್ನು ನೀಡಿದ್ದರು ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ದೇವಾಲಯಕ್ಕೆ ಏನಾದರೂ ಅಗತ್ಯ ಇದೆ ಎಂಬುದು ನನ್ನ ಗಮನಕ್ಕೆ ಬಂದರೆ ನಾನು ಈ ರೀತಿ ಕೊಡುಗೆ ನೀಡುತ್ತೇನೆ. ದೇವರ ಸೇವೆಗಾಗಿ ನನಗೆ ಪ್ರಚಾರ ಬೇಡ ಎಂದು 'ಪ್ರಜಾವಾಣಿ' ಜತೆ ಮಾತನಾಡಿದ ಘನಿ ಹೇಳಿದ್ದಾರೆ.
25 ವರ್ಷಗಳಿಂದ ಘನಿ ಅವರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ನೀವು ಹೇಗೆ ವೆಂಕಟೇಶ್ವರನ ಭಕ್ತರಾದಿರಿ ಎಂದು ಕೇಳಿದಾಗ, ಅದು ರಹಸ್ಯ. ನನ್ನ ಮತ್ತು ಅವನ ನಡುವೆ ಇರುವ ಪರಸ್ಪರ ಅರ್ಥೈಸಿಕೊಳ್ಳುವಿಕೆ ಎಂದಿದ್ದಾರೆ.
ವೆಂಕಟೇಶ್ವರ, ಅಲ್ಲಾಹು ಅಥವಾ ಯೇಸು...ನಾನು ದೇವರೊಬ್ಬನೇ ಎಂದು ನಂಬುವವನು. ಈ ಸಾಮಾನ್ಯ ವಿಷಯವನ್ನು ಜನರು ಅರ್ಥ ಮಾಡುವುದಿಲ್ಲ ಅದೇ ನಮ್ಮ ಮುಂದಿರುವ ಸವಾಲು ಅಂತಾರೆ ಘನಿ.