ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಕಣಿವೆಯಲ್ಲಿ ನಿಲ್ಲದ ಆತಂಕ: ಮನೆಯವರ ಮಾಹಿತಿ, ಸುದ್ದಿಯಿಲ್ಲದೆ ಜನರ ಪರದಾಟ

ಜಮ್ಮು ಮತ್ತು ಕಾಶ್ಮೀರದಲ್ಲಿ ‘ಸುದ್ದಿ ಬರಗಾಲ’!
Last Updated 11 ಆಗಸ್ಟ್ 2019, 11:34 IST
ಅಕ್ಷರ ಗಾತ್ರ

ಶ್ರೀನಗರ:ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ರದ್ದತಿ ಸಂದರ್ಭ ರಾಜ್ಯದಲ್ಲಿ ಅಂತರ್ಜಾಲ, ದೂರವಾಣಿ ಸಂಪರ್ಕ ಸ್ಥಗಿತ ಮತ್ತು ಸುದ್ದಿ ಪ್ರಸರಣದ ಮೇಲೆ ಹೇರಿರುವ ನಿರ್ಬಂಧ ಇನ್ನೂ ಪೂರ್ತಿಯಾಗಿ ತೆರವಾಗಿಲ್ಲ. ಪರಿಣಾಮವಾಗಿ ಕಾಶ್ಮೀರ ಕಣಿವೆ ಜನರು ದೇಶದ ಇತರೆಡೆ, ವಿದೇಶಗಳಲ್ಲಿ ನೆಲೆಸಿರುವ ತಮ್ಮ ಕುಟುಂಬದವರ ಮಾಹಿತಿ ದೊರೆಯದೆ ಆತಂಕದಲ್ಲೇ ದಿನದೂಡುವಂತಾಗಿದೆ. ಜತೆಗೆ, ಸುದ್ದಿ ಪ್ರಸಾರಕ್ಕೂ ಅಡ್ಡಿಯಾಗಿದೆ.

ನಿಷೇಧಾಜ್ಞೆಯನ್ನು ಸಡಿಲಗೊಳಿಸುವ ಮೂಲಕ ರಾಜ್ಯವು ಸಹಜಸ್ಥಿತಿಗೆ ಮರಳಲು ಅವಕಾಶ ಮಾಡಿಕೊಡಲಾಗಿದೆ. ಆದರೂ ಸ್ಥಿರ ಮತ್ತು ಚರ ದೂರವಾಣಿ ಸಂಪರ್ಕ, ಅಂತರ್ಜಾಲ ಸೌಲಭ್ಯ ದೊರೆಯದೆ ಪತ್ರಕರ್ತರು ಪರದಾಡುವಂತಾಗಿದೆ. ಮಾಹಿತಿ, ಸುದ್ದಿ ಲಭ್ಯವಾಗದೇ ಇರುವುದರಿಂದ ಸ್ಥಳೀಯ ಪತ್ರಿಕೆಗಳು ಪುಟಗಳ ಸಂಖ್ಯೆಯನ್ನೇ ಕಡಿಮೆ ಮಾಡಿವೆ ಎಂದುದಿ ಇಂಡಿಯನ್ ಎಕ್ಸ್‌ಪ್ರೆಸ್ವರದಿ ಮಾಡಿದೆ.

‘ಈ ಬಾರಿ ಸ್ಥಿರ ದೂರವಾಣಿ ಸೇವೆಯನ್ನೂ ರದ್ದುಗೊಳಿಸಲಾಗಿದೆ. ಮಾಧ್ಯಮ ಸಿಬ್ಬಂದಿಗೆ ಕರ್ಫ್ಯೂ ಪಾಸ್‌ಗಳನ್ನೂ ನೀಡುತ್ತಿಲ್ಲ. ಕಾಶ್ಮೀರದಲ್ಲಿನ ಸುದ್ದಿ ಹೊರ ಹೋಗದಂತೆ ನೋಡಿಕೊಳ್ಳುವುದೇ ಇದರ ಉದ್ದೇಶವಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟರನ್ನು ಭೇಟಿಯಾಗಲು ಮನವಿ ಮಾಡಿದೆ. ಆದರೆ ಅವರು ನಿರಾಕರಿಸಿದರು’ ಎಂಬ ಕಾಶ್ಮೀರ ಪ್ರೆಸ್ ಕ್ಲಬ್ ಕಾರ್ಯದರ್ಶಿ ಇಶ್ಫಾಕ್ ತಾಂತ್ರಿ ಹೇಳಿಕೆಯನ್ನೂ ವರದಿ ಒಳಗೊಂಡಿದೆ.

ಮಾಧ್ಯಮಗಳಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ‘ಭಾರತೀಯ ಪತ್ರಿಕಾ ಮಂಡಳಿ’ ಮತ್ತು ‘ಅಂತರರಾಷ್ಟ್ರೀಯ ಪತ್ರಕರ್ತರ ಸಂಘಟನೆ’ ಬಳಿಯೂಇಶ್ಫಾಕ್ ಶನಿವಾರ ಮನವಿ ಮಾಡಿದ್ದರು. ಆದರೆ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಸಿಬ್ಬಂದಿಗೆ ಕಚೇರಿಗೆ ಬರಲು ಸಾಧ್ಯವಾಗದೇ ಇರುವುದು, ಮಾಹಿತಿ ಅಲಭ್ಯತೆ ಕಾರಣಗಳಿಂದಾಗಿ 20 ಪುಟಗಳ ನಮ್ಮ ಪತ್ರಿಕೆಯನ್ನು ನಾಲ್ಕು ಪುಟಗಳಿಗೆ ಕಡಿತಗೊಳಿಸಿದ್ದೇವೆ ಎಂದು ಶ್ರೀನಗರ ಮೂಲದ ಆಂಗ್ಲ ಭಾಷಾ ಪತ್ರಿಕೆ ‘ರೈಸಿಂಗ್ ಕಾಶ್ಮೀರ್’ನ ಪತ್ರಕರ್ತರೊಬ್ಬರು ತಿಳಿಸಿದ್ದಾರೆ. ಮುದ್ರಣ ಮಾಧ್ಯಮಗಳಿಗೆ ಸುದ್ದಿವಾಹಿನಿಗಳನ್ನು ನೋಡಿ ಸುದ್ದಿ ಬರೆದುಕೊಳ್ಳುವಂತಹ ಸ್ಥಿತಿ ಇದೆ ಎಂದು ಕೆಲವು ಪರ್ತಕರ್ತರು ಅಳಲುತೋಡಿಕೊಂಡಿದ್ದಾರೆ.

ಮಾಹಿತಿ ದೊರೆಯದೆ ಜನರ ಪರದಾಟ:ಇತರ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕುಟುಂಬದವರ ಮಾಹಿತಿ ಪಡೆಯಲೂ ಜನರಿಗೆ ಸಾಧ್ಯವಾಗುತ್ತಿಲ್ಲ. ಕುಟುಂಬದವರನ್ನು ಸಂಪರ್ಕಿಸುವ ಸಲುವಾಗಿ ಜನರು ಸರ್ಕಾರಿ ಕಚೇರಿಗಳಿಗೆ ಧಾವಿಸುತ್ತಿದ್ದಾರೆ ಎಂದುವರದಿ ಉಲ್ಲೇಖಿಸಿದೆ.

ಕಳೆದ ಭಾನುವಾರ ರಾತ್ರಿ ದೂರವಾಣಿ, ಅಂತರ್ಜಾಲ ಸಂಪರ್ಕ ಕಡಿತಗೊಂಡ ಬಳಿಕ ಅನೇಕರು ತೊಂದರೆ ಅನುಭವಿಸಿದ್ದಾರೆ. ಸೋಪೊರ್ ಪ್ರದೇಶದ ನಾಜಿರ್ ಅಹ್ಮದ್ ಎಂಬುವವರು ಚಂಡೀಗಡ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಸಹೋದರಿಯನ್ನು ಸಂಪರ್ಕಿಸಲಾಗದೆ ಪರದಾಡಿದರು. ದೂರವಾಣಿ ಕರೆ ಮಾಡುವ ಸಲುವಾಗಿ ಮೊದಲು ಅವರು ಬಿಎಸ್‌ಎನ್‌ಎಲ್ ಕಚೇರಿಗೆ ಮಂಗಳವಾರ ತೆರಳಿದ್ದರು. ಆದರೆ ಸರ್ವರ್ ಡೌನ್ ಇದೆ ಎಂದು ಅಧಿಕಾರಿಗಳು ಅವರನ್ನು ಕಳುಹಿಸಿದ್ದರು. ಮರುದಿನ ಅವರು ಶ್ರೀನಗರ ವಿಮಾನ ನಿಲ್ದಾಣಕ್ಕೆ ತೆರಳಿ ಚಂಡೀಗಡಕ್ಕೆ ತೆರಳುವ ವ್ಯಕ್ತಿಯೊಬ್ಬರಿಗೆ ಸಹೋದರಿಯ ಮೊಬೈಲ್ ಸಂಖ್ಯೆ ಕೊಟ್ಟು ಚಂಡೀಗಡ ತಲುಪಿದ ಕೂಡಲೇ ಕರೆ ಮಾಡಿ ವಿಚಾರಿಸುವಂತೆ ಮನವಿ ಮಾಡಿದ್ದರು. ಕೊನೆಗೆ ಶ್ರೀನಗರದಬಿಎಸ್‌ಎನ್‌ಎಲ್ ಕಚೇರಿಗೆ ಹಾಗೂ ನಗರದಲ್ಲಿರುವ ಪ್ರಾದೇಶಿಕ ಉಪ ಆಯುಕ್ತರ ಕಚೇರಿಗೆ ತೆರಳಿದರೂ ಅಲ್ಲಿ ಅವರಿಗೆ ಪ್ರವೇಶ ನಿರ್ಬಂಧಿಸಲಾಯಿತು. ಕೊನೆಗೆ, ಗುರುವಾರ ಪೊಲೀಸ್ ಅಧಿಕಾರಿಯೊಬ್ಬರ ದೂರವಾಣಿ ಮೂಲಕ ಸಹೋದರಿಯನ್ನು ಸಂಪರ್ಕಿಸುವುದು ಸಾಧ್ಯವಾಯಿತು ಎಂದು ವರದಿ ತಿಳಿಸಿದೆ.

ಈ ಮಧ್ಯೆ, ಸಾರ್ವಜನಿಕರಿಗಾಗಿ 300 ದೂರವಾಣಿ ಬೂತ್‌ಗಳನ್ನು ತೆರೆಯಲಾಗಿದೆ ಎಂದು ಸರ್ಕಾರ ಹೇಳಿದ್ದರೂ ಅವು ಯಾವ ಪ್ರದೇಶಗಳಲ್ಲಿ ಇವೆ ಎಂಬ ಮಾಹಿತಿ ಇಲ್ಲ. ‘ಒಂದು ವೇಳೆದೂರವಾಣಿ ಬೂತ್‌ಗಳು ಎಲ್ಲಿವೆ ಎಂದು ಗೊತ್ತಾದರೂ ನಾವಲ್ಲಿಗೆ ತೆರಳುವುದು ಹೇಗೆ? ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು ಕರ್ಫ್ಯೂ ಪಾಸ್‌ಗಳನ್ನು ಕೇಳುತ್ತಾರೆ. ನಾವು ಕರ್ಫ್ಯೂ ಪಾಸ್‌ಗಳನ್ನು ಪಡೆದುಕೊಳ್ಳುವುದುಹೇಗೆ?’ ಎಂದು ಶ್ರೀನಗರದ ನಿವಾಸಿಯೊಬ್ಬರು ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿರುವ ಮಗಳನ್ನು ಸಂಪರ್ಕಿಸಲು ಹಳೆ ಶ್ರೀನಗರದ ಅಲಿ ಮೊಹಮ್ಮದ್ ಮತ್ತು ಅವರ ಪತ್ನಿ ಮೂರು ದಿನ ಕಷ್ಟಪಡಬೇಕಾಯಿತು. ಕೊನೆಗೆ ಸಂಬಂಧಿಕರೊಬ್ಬರ ಸಹಾಯದಿಂದ ಮಗಳಿಗೆ ಸಂದೇಶ ಕಳುಹಿಸುವುದು ಸಾಧ್ಯವಾಯಿತು. ಇದಕ್ಕೆ ಆಕೆ, ದೆಹಲಿಯಿಂದ ಊರಿಗೆ ತೆರಳುವ ಸ್ನೇಹಿತನ ಮೂಲಕ ಪತ್ರ ಕಳುಹಿಸಿ ಪ್ರತಿಕ್ರಿಯೆ ನೀಡಬೇಕಾಯಿತು.

ಸೌದಿ ಅರೇಬಿಯಾದಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿಲಾಲ್ ಅಹ್ಮದ್ ಎಂಬುವವರು ಸೋಮವಾರ ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಬೇಕಾಗಿತ್ತು. ಅವರನ್ನು ಕರೆದೊಯ್ಯಲೆಂದು ನಿಲ್ದಾಣಕ್ಕೆ ಬಂದ ಅವರ ಸಹೋದರ ಇಡೀ ದಿನ ಕಾದರೂ ಅಹ್ಮದ್ ಅವರ ಸುಳಿವಿಲ್ಲ. ಆ ದಿನದ ಕೊನೆಯ ವಿಮಾನ ಬಂದ ಬಳಿಕ ಯಾವುದೇ ಮಾಹಿತಿ ದೊರೆಯದೆ ಬೇಸರದಿಂದಲೇ ಅವರು ಮನೆಗೆ ತೆರಳಿದರು. ಮರುದಿನ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ ಅವರು ಸ್ಯಾಟಲೈಟ್ ದೂರವಾಣಿ ಮೂಲಕ ಬಿಲಾಲ್‌ರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಕೊನೆಗೆ ದೆಹಲಿಗೆ ತೆರಳಿದ ಸಂಬಂಧಿಯೊಬ್ಬರ ಮೂಲಕಬಿಲಾಲ್‌ ಅವರನ್ನು ಸಂಪರ್ಕಿಸುವುದು ಸಾಧ್ಯವಾಯಿತು. ಈ ವೇಳೆ, ಬಿಲಾಲ್ ವಿಮಾನ ಟಿಕೆಟ್‌ ರದ್ದುಗೊಳಿಸಿ ಸೌದಿ ಅರೇಬಿಯಾದಲ್ಲೇ ಉಳಿದಿರುವ ವಿಷಯ ತಿಳಿಯಿತು. ಅಂತರ್ಜಾಲ, ಸ್ಥಿರ–ಚರ ದೂರವಾಣಿ ಸೌಲಭ್ಯ ಸ್ಥಗಿತವಾಗಿರುವುದರಿಂದ ಕಣಿವೆ ರಾಜ್ಯದಲ್ಲಿ ನೂರಾರು ಜನಇದೇ ರೀತಿ ಆತಂಕದಿಂದ ದಿನ ಕಳೆಯುವಂತಾಗಿದೆ ಎಂದುಇಂಡಿಯನ್ ಎಕ್ಸ್‌ಪ್ರೆಸ್ವರದಿ ಉಲ್ಲೇಖಿಸಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT