ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಹಿರೇಮಠ ಮೇಲೆ ಹಲ್ಲೆಗೆ ಯತ್ನ

ಬೆಂಬಲಿಗರ ಜೊತೆ ಕೇತಗಾನಹಳ್ಳಿ ಜಮೀನು ವೀಕ್ಷಣೆಗೆ ಹೋಗಿದ್ದಾಗ ಘಟನೆ
Last Updated 20 ಜನವರಿ 2020, 20:59 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಗೆ ಸೋಮವಾರ ಭೇಟಿ ನೀಡಿದ ಸಾಮಾಜಿಕ ಹೋರಾಟಗಾರ ಎಸ್‌.ಆರ್. ಹಿರೇಮಠ ಹಾಗೂ ಬೆಂಬಲಿಗರ ಮೇಲೆ ಕೆಲವರು ಮೊಟ್ಟೆ ಎಸೆದು ಹಲ್ಲೆಗೆ ಯತ್ನಿಸಿದ ಘಟನೆ ನಡೆಯಿತು.

ಕೇತಗಾನಹಳ್ಳಿಯಲ್ಲಿ ಒತ್ತುವರಿಯಾಗಿದೆ ಎನ್ನಲಾದ ಜಮೀನಿನ ವಸ್ತುಸ್ಥಿತಿ ವೀಕ್ಷಣೆಗಾಗಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ, ಸಾಮಾಜಿಕ ಹೋರಾಟಗಾರ ರವಿಕೃಷ್ಣರೆಡ್ಡಿ ನೇತೃತ್ವದ ತಂಡವು ಬೆಳಿಗ್ಗೆ 10.30ಕ್ಕೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮದ ಮನೆಯೊಂದರಲ್ಲಿ ಮಾಹಿತಿ ಪಡೆಯುತ್ತಿದ್ದಾಗ ಅಲ್ಲಿಗೆ ಬಂದ ಗ್ರಾಮಸ್ಥರ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿತು.

ಪ್ರಭುಗೌಡ, ಮಲ್ಲಿಕಾರ್ಜುನಯ್ಯ ಎಂಬುವರ ಮೇಲೆ ಹಲ್ಲೆ ನಡೆಸಿತು. ಬ್ಯಾಗ್‌, ಫೋನ್‌ ಕಸಿದುಕೊಂಡು ಹಲ್ಲೆಗೆ ಮುಂದಾಯಿತು. ಕೆಲವರು ಕೋಳಿ ಮೊಟ್ಟೆ ಎಸೆದರು. ಕಾರಿನ ಚಕ್ರಗಳ ಗಾಳಿಯನ್ನೂ ತೆಗೆಯಲಾಗಿತ್ತು ಎಂದು ದೂರಲಾಗಿದೆ. ಈ ಸಂಬಂಧ ಹನುಮಂತೇಗೌಡ ಎಂಬುವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ: ‘ಕೇತಗಾನಹಳ್ಳಿಯಲ್ಲಿ ನಡೆದಿರುವ ಭೂ ಅಕ್ರಮಗಳ ಕುರಿತು ಲೋಕಾಯುಕ್ತರು ನೀಡಿರುವ ಆದೇಶ ಜಾರಿ ಮಾಡುವಂತೆ ಇದೇ 14ರಂದು ಮುಖ್ಯ ನ್ಯಾಯಾಧೀಶರ ನೇತೃತ್ವದ ಹೈಕೋರ್ಟ್‌ ವಿಭಾಗೀಯ ಪೀಠವು ಸರ್ಕಾರಕ್ಕೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಜಮೀನಿನ ಪ್ರಸ್ತುತ ವಸ್ತುಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲು ಬಂದಿದ್ದೆವು. ಆಗ ಈ ಘಟನೆ ನಡೆಯಿತು’ ಎಂದು ಎಸ್‌.ಆರ್. ಹಿರೇಮಠ ವಿವರಿಸಿದರು.

‘ಕೇತಗಾನಹಳ್ಳಿಯಲ್ಲಿ 110 ಎಕರೆ ಗೋಮಾಳವನ್ನು ಒಳಗೊಂಡು 200 ಎಕರೆ ಜಮೀನನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಎಚ್‌.ಡಿ. ದೇವೇಗೌಡರ ಕುಟುಂಬದವರಾದ ಎಚ್‌.ಡಿ. ಕುಮಾರಸ್ವಾಮಿ 54 ಎಕರೆ ಒತ್ತುವರಿ ಮಾಡಿದ್ದಾರೆ. ಡಿ.ಸಿ. ತಮ್ಮಣ್ಣ ಕುಟುಂಬದಿಂದ 94 ಎಕರೆ ಒತ್ತುವರಿ ಆಗಿದೆ. 1988ರಿಂದಲೂ ಈ ಬಗ್ಗೆ ಹೋರಾಟ ನಡೆದಿದೆ. ಆದರೂ ಇವರು ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT