ನವದೆಹಲಿ: ಜೀವದ ಹಂಗು ತೊರೆದು ಅಪಾಯದಲ್ಲಿದ್ದವರನ್ನು ರಕ್ಷಿಸಿ ಸಾಹಸ ಮೆರೆದಿದ್ದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹಿರೇರಾಯನಕುಂಪಿ ಗ್ರಾಮದ 6ನೇ ತರಗತಿ ವಿದ್ಯಾರ್ಥಿ ವೆಂಕಟೇಶ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ನವಿಲಗೋಣ ಗ್ರಾಮದ 4ನೇ ತರಗತಿ ವಿದ್ಯಾರ್ಥಿನಿ ಆರತಿ ಸೇಟ್ ಅವರುಪ್ರಸಕ್ತ ಸಾಲಿನ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಳೆದ ಆಗಸ್ಟ್ 10ರಂದು ಕೃಷ್ಣಾ ನದಿಗೆ ತಲೆದೋರಿದ್ದ ಭಾರಿ ಪ್ರವಾಹದ ವೇಳೆ ಕಾಯಿಲೆಪೀಡಿತ ಮಕ್ಕಳು ಹಾಗೂ ಮಹಿಳೆಯೊಬ್ಬರ ಶವ ಸಾಗಿಸುತ್ತಿದ್ದ ಆಂಬುಲೆನ್ಸ್ಗೆ ಜಲಾವೃತವಾಗಿದ್ದ ಸೇತುವೆ ದಾಟಲು ವೆಂಕಟೇಶ್ ನೆರವಾಗಿದ್ದ.
ಎದೆ ಮಟ್ಟದವರೆಗೆ ಜಲಾವೃತವಾಗಿದ್ದ ಸೇತುವೆಯ ಆಚೆಯ ದಡದ ವರೆಗೆ ನೀರಲ್ಲಿ ಆಂಬುಲೆನ್ಸ್ನ ಚಾಲಕನಿಗೆ ದಾರಿ ತೋರಿಸಿ ನೆರವಾಗಿದ್ದ ಈತ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ.
‘ಜೀವವನ್ನೇ ಪಣಕ್ಕಿಟ್ಟು ತುಂಬಿ ಹರಿಯುತ್ತಿದ್ದ ನದಿಗೆ ಇಳಿದು ಆಂಬುಲೆನ್ಸ್ಗೆ ದಾರಿ ತೋರಿದ್ದ ಮಗನ ಸಾಹಸದ ಬಗ್ಗೆ ಹೆಮ್ಮೆ ಎನ್ನಿಸಿದೆ’ ಎಂದು ವೆಂಕಟೇಶ್ ತಂದೆ ದೇವೇಂದ್ರಪ್ಪ ಸಂಕನೂರ ‘ಪ್ರಜಾವಾಣಿ’ಗೆ ತಿಳಿಸಿದರು.
2018ರ ಜುಲೈ 13ರಂದು ಎರಡು ವರ್ಷ ವಯಸ್ಸಿನ ತನ್ನ ತಮ್ಮನ ಮೇಲೆ ಕೋಪೋದ್ರಿಕ್ತ ಹಸು ದಾಳಿ ನಡೆಸಿದಾಗ ಪ್ರಾಣ ಲೆಕ್ಕಿಸದೆ ರಕ್ಷಣೆಗೆ ಧಾವಿಸಿದ ಆರತಿ ಶೌರ್ಯ ಪ್ರದರ್ಶಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.