ಬೆಂಗಳೂರು: ‘ಕೊರೊನಾ ನಿಯಂತ್ರಣದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ‘#ಲೆಕ್ಕ ಕೊಡಿ’ ಎಂಬ ಹ್ಯಾಷ್ ಟ್ಯಾಗ್ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಿಡಿಯೊ ಅಭಿಯಾನ ಆರಂಭಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಪಕ್ಷದ ಎಲ್ಲ ಶಾಸಕರು, ಸಂಸದರು, ಕಾರ್ಯಕರ್ತರು ವಿಡಿಯೊ ಮಾಡಿ, ಶೇರ್ ಮಾಡುವ ಮೂಲಕ ಇದರಲ್ಲಿ ಭಾಗವಹಿಸಬೇಕು’ ಎಂದೂ ವಿನಂತಿಸಿದ್ದಾರೆ.
ವಿಡಿಯೊದಲ್ಲಿ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗಳು ಹೀಗಿವೆ...
ಕೇಳುತ್ತಿದ್ದಾರೆ ಲೆಕ್ಕ...
* ಕೊರೊನಾ ಸೋಂಕು ಬಂದಾಗಿನಿಂದ ಇದುವರೆಗೆ ರಾಜ್ಯ ಸರ್ಕಾರ ಖರ್ಚು ಮಾಡಿದ ಹಣ ಎಷ್ಟು? ಕೇಂದ್ರ ಸರ್ಕಾರ ಎಷ್ಟು ನೀಡಿದೆ. ಯಾವ ಯಾವ ಇಲಾಖೆ, ಯಾವ ಯಾವ ಪಾವತಿಗೆ ಎಷ್ಟು ಹಣ ಖರ್ಚು ಮಾಡಿದೆ.
* ಪಿಪಿಇ ಕಿಟ್, ಟೆಸ್ಟ್ ಕಿಟ್, ಗ್ಲೌಸ್, ಸಾನಿಟೈಸರ್, ಥರ್ಮಲ್ ಸ್ಕ್ಯಾನರ್, ಕಿಯೋಸ್ಕ್ ಮುಂತಾದವುಗಳಿಗೆ ಮಾರುಕಟ್ಟೆ ದರ ಎಷ್ಟು? ನೀವು ಪ್ರತಿಯೊಂದನ್ನೂ ಯಾವ ಯಾವ ದರದಲ್ಲಿ ಖರೀದಿಸಿದ್ದೀರಿ. ಯಾವ ಯಾವ ಕಂಪನಿಗಳಿಂದ ಖರೀದಿಸಿದ್ದೀರಿ.
* ಈವರೆಗೆ ಫುಡ್ ಕಿಟ್, ಫುಡ್ ಪ್ಯಾಕೇಜ್ ಎಷ್ಟು ಕೊಟ್ಟಿದ್ದೀರಿ? ಯಾರಿಗೆ ಕೊಟ್ಟಿದ್ದೀರಿ? ಪ್ರತಿಯೊಂದಕ್ಕೆ ಎಷ್ಟು ಹಣ ಖರ್ಚು ಮಾಡಿದ್ದೀರಿ. ಆಹಾರ ತಯಾರಿಸಿ ಕೊಟ್ಟವರು ಯಾರು? ತಾಲ್ಲೂಕುವಾರು, ವಾರ್ಡ್ವಾರು ಲೆಕ್ಕ ಕೊಡಿ.
* ವಲಸೆ ಕಾರ್ಮಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಎಷ್ಟು ಫುಡ್ ಕಿಟ್ ಕೊಟ್ಟಿದ್ದೀರಿ. ಏನೇನು ಕೊಟ್ಟಿದ್ದೀರಿ? ಪ್ರತಿ ಕಿಟ್ಗೆ ಖರ್ಚಾದ ಹಣ ಎಷ್ಟು?
* ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ, ರಾಜ್ಯ ಸರ್ಕಾರ ಘೋಷಿಸಿದ ಪ್ಯಾಕೇಜ್ಗಳು ಯಾವುವು? ಯಾವ ವೃತ್ತಿಯವರಿಗೆ, ಯಾವ ಯಾವ ಸಮುದಾಯದವರಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ?
* ಕೊರೊನಾ ಸಂಕಷ್ಟದಲ್ಲಿರುವವರ ಆರೈಕೆಗೆ ಎಷ್ಟು ಖರ್ಚು ಮಾಡಿದ್ದೀರಿ?
’ಈ ಎಲ್ಲದರ ಸಂಪೂರ್ಣ ಲೆಕ್ಕ ಕೊಡಿ. ಲೆಕ್ಕ ಕೇಳುವುದು ರಾಜ್ಯ ಜನತೆಯ ಹಕ್ಕು. ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ’ ಎಂದೂ ಅವರು ಆಗ್ರಹಿಸಿದ್ದಾರೆ.
ಕೊರೊನಾ ನಿಯಂತ್ರಣದ ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ.