ಚಿತ್ರದುರ್ಗ: ವೇದಾವತಿ ನದಿಗೆ ನೀರು ಹರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಚಳ್ಳಕೆರೆ ಹಾಗೂ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಜನರು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಸೇಬು, ಮೊಸಂಬಿಯ ಬೃಹತ್ ಹಾರ ಹಾಕಿ ಸಂಭ್ರಮಿಸಿದರು. ಸೋಂಕು ನಿಯಂತ್ರಣಕ್ಕೆ ಸರ್ಕಾರವೇ ರೂಪಿಸಿದ ಅಂತರ ಹಾಗೂ ಮಾಸ್ಕ್ ನಿಯಮಗಳನ್ನು ಗಾಳಿಗೆ ತೂರಲಾಯಿತು.
ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿಗೆ 0.50 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಹಲವು ವರ್ಷಗಳ ಬಳಿಕ ನದಿಯಲ್ಲಿ ನೀರು ಹರಿದಿದ್ದನ್ನು ಕಂಡ ಜನರು ಸಂತಸಗೊಂಡಿದ್ದಾರೆ. ನದಿಗೆ ನಿರ್ಮಿಸಿದ ಬ್ಯಾರೇಜುಗಳಿಗೆ ಬಾಗೀನ ಅರ್ಪಿಸಲು ಬಂದ ಸಚಿವರನ್ನು ಜನರು ಅಭಿನಂದಿಸಿದ ಪರಿಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಯೂ ವ್ಯಕ್ತವಾಗುತ್ತಿದೆ.
ಪರಶುಂರಾಪುರದಲ್ಲಿ ಎತ್ತಿನ ಗಾಡಿಯ ಮೇಲೆ ಮೆರವಣಿಗೆಯಲ್ಲಿ ಬಂದ ಸಚಿವ ಶ್ರೀರಾಮುಲು, ಸಂಸದ ಎ.ನಾರಾಯಣಸ್ವಾಮಿ ಹಾಗೂ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಬೃಹತ್ ಸೇಬಿನ ಹಾರ ಹಾಕಲಾಯಿತು. ನೂರಾರು ಜನ ಅಂತರ ಮರೆತು ಹರ್ಷೋದ್ಘಾರ ಮಾಡಿದರು. ಜನಪ್ರತಿನಿಧಿಗಳು ಸೇರಿದಂತೆ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.