ಬೆಂಗಳೂರು:ರಾಜ್ಯದಲ್ಲಿ ಮಂಗಳವಾರ ಸಂಜೆ 5 ಗಂಟೆಯಿಂದ ಬುಧವಾರ ಸಂಜೆ 5 ಗಂಟೆ ನಡುವಣ ಅವಧಿಯಲ್ಲಿ 267 ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ. ವ್ಯಕ್ತಿಯೊಬ್ಬರುಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಇದರೊಂದಿಗೆ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4 ಸಾವಿರ ಗಡಿ ದಾಟಿದೆ.
ಇಂದು ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ 250 ಮಂದಿ ಬೇರೆ ರಾಜ್ಯಗಳಿಂದ ಬಂದವರು ಎಂದು ಸಚಿವಾಲಯ ತಿಳಿಸಿದೆ. ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4,063ಕ್ಕೆ ಏರಿಕೆಯಾಗಿದ್ದು, ಈವರೆಗೆ 53 ಜನ ಮೃತಪಟ್ಟಿದ್ದಾರೆ. 1,514 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಕಲಬುರ್ಗಿಯಲ್ಲಿ ಒಂದೇ ದಿನ 105 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 510ಕ್ಕೆ ಏರಿಕೆಯಾಗಿದೆ. ಮಂಡ್ಯದಲ್ಲಿ ಹೊಸದಾಗಿ 13 ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 302ಕ್ಕೆ ಏರಿಕೆಯಾಗಿದೆ.
ಉಳಿದಂತೆ ಉಡುಪಿಯಲ್ಲಿ 62, ಬೆಂಗಳೂರಿನಲ್ಲಿ 20, ರಾಯಚೂರು 35, ಯಾದಗಿರಿ 9, ಹಾಸನ 1, ದಾವಣಗೆರೆ 3, ವಿಜಯಪುರ 6, ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆ, ಶಿವಮೊಗ್ಗ, ಕೋಲಾರ ತಲಾ 2, ಬಳ್ಳಾರಿ, ಧಾರವಾಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ 1 ಪ್ರಕರಣಗಳು ದೃಢಪಟ್ಟಿವೆ.