ಬೆಂಗಳೂರು:ಲಾಕ್ಡೌನ್ ಸಮಯದಲ್ಲಿ ಜನರು ಮನೆ ಬಿಟ್ಟು ಹೊರ ಹೆಜ್ಜೆ ಹಾಕದಂತೆ ತಡೆಯುವ ನಿಟ್ಟಿನಲ್ಲಿ ಇಷ್ಟು ದಿನ ಲಾಠಿ ಬೀಸುತ್ತಿದ್ದ ಪೊಲೀಸರು ಈಗ ಮೃದುವಾಗಿದ್ದಾರೆ.
ಹೊರ ಬರುವ ಜನರಿಗೆ ಮನೆ ಒಳಗೆ ಇರುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಲಾಕ್ಡೌನ್ ನಿಯಮ ಉಲ್ಲಂಘಿಸಿವರಿಗೆ ಲಾಠಿ ಬೀಸುವ ಹೊರತಾಗಿ ಶಿಕ್ಷೆಯ ಹೊಸ ಮಾರ್ಗಗಳನ್ನು ಪೊಲೀಸರು ಅನುಸರಿಸುತ್ತಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುತುವರ್ಜಿ ವಹಿಸಿರುವ ಪೊಲೀಸರು ಹೊರ ಬರುವ ಜನರಿಗೆ ಮನೆಯಲ್ಲೇ ಉಳಿಯುವಂತೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಲಾಕ್ಡೌನ್ ನಿಯಮ ಧಿಕ್ಕರಿಸುವವರಿಗೆ ಮೆಡಿಕಲ್ ಶಾಪ್ ಮತ್ತು ದಿನಸಿ ಅಂಗಡಿಗಳ ಮುಂದೆ ಚೌಕ ಅಥವಾ ವೃತ್ತಗಳನ್ನು ಬರೆಯುವ ಶಿಕ್ಷೆ ನೀಡುತ್ತಿದ್ದಾರೆ. ಕೆಲ ಪೊಲೀಸರು ಸಿಟ್ಅಪ್ಸ್ ಶಿಕ್ಷೆಯನ್ನೂ ಕೊಡುತ್ತಿದ್ದಾರೆ.
ದೇಶದಲ್ಲಿ ಲಾಕ್ಡೌನ್ ಘೋಷಣೆಯಾದ ನಂತರ ಮನೆ ಬಿಟ್ಟು ಹೊರಬಂದ ಜನರ ಮೇಲೆ ಲಾಠಿ ಪ್ರಹಾರ ನಡೆಸಲಾಯಿತು. ಪೊಲೀಸರ ಈ ಕ್ರಮವು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆ ಕಾರಣ ಶಿಕ್ಷೆ ನೀಡುವ ತಂತ್ರಗಳನ್ನು ಪೊಲೀಸರು ಬದಲಿಸಿಕೊಂಡಿದ್ದಾರೆ.
ತಮ್ಮ ಅಧಿಕಾರಿಗಳು ಜನರನ್ನು ಅನಗತ್ಯವಾಗಿ ಹೊಡೆಯಬಾರದು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಹೇಳಿದ್ದಾರೆ.
ಜನರನ್ನು ಚದುರಿಸುವಾಗ ಲಾಠಿ ಬಳಸದಂತೆ ಕಾನ್ಸ್ಟೆಬಲ್ಗಳು ಮತ್ತು ಇತರ ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಎನ್.ಶಶಿಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.