ಮೈಸೂರು: ಕೊರೊನಾ ವೈರಸ್ ಸೋಂಕು (ಕೋವಿಡ್–19) ದೃಢಪಟ್ಟಿರುವ ದೆಹಲಿಯ ಐವರು ಧರ್ಮಗುರುಗಳು 40 ದಿನ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಸಂಚಾರ ಮಾಡಿದ್ದಾರೆ.
ಮಾರ್ಚ್ 13ರಿಂದ 23ರವರೆಗೆ ನಾಗಮಂಗಲದ ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಪ್ರತಿದಿನ ಐದು ಬಾರಿ ಪ್ರಾರ್ಥನೆ ಮಾಡಿದ್ದು, ಈ ವೇಳೆ ನೂರಾರು ಜನರು ಅವರ ಸಂಪರ್ಕಕ್ಕೆ ಬಂದಿದ್ದಾರೆ.
ಮಾರ್ಚ್ 23ರಿಂದ 29ರವರೆಗೆ ಮಳವಳ್ಳಿಯಲ್ಲಿ ವಾಸ್ತವ್ಯವಿದ್ದರು. ಲಾಕ್ಡೌನ್ ಘೋಷಣೆ ಆದ ನಂತರ ಮಸೀದಿ ಪಕ್ಕದ ಮನೆಯಲ್ಲಿ ವಾಸವಿದ್ದರು.
ಮಾರ್ಚ್ 29ರಂದು ಮತ್ತೆ ಮೈಸೂರಿಗೆ ತೆರಳುವಾಗ ಬನ್ನೂರು ಚೆಕ್ಪೋಸ್ಟ್ನಲ್ಲಿ ಮೈಸೂರು ಜಿಲ್ಲಾಡಳಿತ ವಶಕ್ಕೆ ಪಡೆದಿತ್ತು. ಬಳಿಕ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ.
ಒಂದೇ ದಿನ ಮೈಸೂರಿನಲ್ಲಿ ಸೋಂಕಿಗೆ ಒಳಗಾದವರು 7 ಮಂದಿ!
ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 7 ಮಂದಿಯಲ್ಲಿ ‘ಕೋವಿಡ್–19’ ಕಾಯಿಲೆ ಕಾಣಿಸಿಕೊಂಡಿದೆ.
ಇವರಲ್ಲಿ ಇಬ್ಬರು ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ ನೌಕರರ ಸಂಪರ್ಕಕ್ಕೆ ಬಂದವರಾಗಿದ್ದರೆ, ಉಳಿದ ಐವರು ದೆಹಲಿ ಪ್ರವಾಸದಿಂದ ಬಂದವರಾಗಿದ್ದಾರೆ. ಎಲ್ಲರನ್ನೂ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.
ಇಲ್ಲಿಗೆ ಜಿಲ್ಲೆಯಲ್ಲಿ ಕೋವಿಡ್–19 ಕ್ಕೆ ಒಳಗಾದವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.