ಬೆಂಗಳೂರು: ನೆರೆ ಹಾವಳಿಯಿಂದ ಆಗಿರುವ ನಷ್ಟದ ಅಂದಾಜು ವರದಿಯನ್ನು ಸರಿಯಾಗಿ ಮಾಡಿಲ್ಲ, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದೆ. ರಾಜ್ಯದ ಇತಿಹಾಸದಲ್ಲೇ ಇಂತಹ ಪ್ರಸಂಗ ಮೊದಲ ಬಾರಿ ನಡೆದಿದೆ ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದರು.
‘ರಾಜ್ಯಕ್ಕಾಗಿರುವ ಅವಮಾನ ಇದು. ಕೇಂದ್ರದ ಸಂಪುಟ ಸಭೆಯಲ್ಲೇ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಆಗುವುದಿಲ್ಲವೇ ಎಂದು ಕಠಿಣವಾದ ಶಬ್ದಗಳಿಂದ ಕೇಳಿದ್ದಾರೆ. ಬಹುಶಃ ತಾನು ಏನು ಮಾಡಿದರೂ ನಡೆಯುತ್ತದೆ ಎಂದು ಕೇಂದ್ರ ಸರ್ಕಾರ ಭಾವಿಸಿದಂತಿದೆ. ಮೋದಿಗೆ ಜೈಕಾರ ಹಾಕುವವರು ಇನ್ನಾದರೂ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಬಿಜೆಪಿ ಸಂಸದರಿಗೆ ಹೆದರಿಕೆ ಶುರುವಾಗಿದೆ,ಮೋದಿ ಎದುರು ಮಾತನಾಡದಿರುವುದು ಶಿಸ್ತು ಅಲ್ಲ.ಅದು ಅವರಿಗಿರುವ ಭಯ. ಚಕ್ರವರ್ತಿ ಸೂಲಿಬೆಲೆ ಅಂತಹವರು ಇದೀಗ ಮೋದಿ ವಿರುದ್ಧವೇ ಮಾತನಾಡತೊಡಗಿದ್ದಾರೆ. ಇನ್ನಷ್ಟು ಮಂದಿ ಸತ್ಯವನ್ನು ಒಪ್ಪಿಕೊಂಡು ಅಭಿಪ್ರಾಯ ವ್ಯಕ್ತಪಡಿಸುವ ಧೈರ್ಯ ತೋರಬೇಕು’ ಎಂದರು.