ಬೆಂಗಳೂರು: ಕೋವಿಡ್ನಿಂದ ಮೃತಪಟ್ಟವರ ದೇಹಗಳನ್ನು ಸೂಕ್ತ ತರಬೇತಿ ಹೊಂದಿದ ಸಿಬ್ಬಂದಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ನೇರವಾಗಿ ಶವಾಗಾರಕ್ಕೆ ಸಾಗಿಸಬೇಕು. ಅಧಿಕ ಸಮಯ ಮೃತ ದೇಹವನ್ನು ಇಡಕೂಡದು.
ಇದುಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯ ಸ್ಪಷ್ಟ ನಿರ್ದೇಶನ.
ರೋಗಿಯ ಮೃತ ದೇಹವನ್ನು ಹೇಗೆ ನಿರ್ವಹಣೆ ಮಾಡಬೇಕು ಹಾಗೂ ಹೇಗೆ ಸಂಸ್ಕಾರ ಮಾಡಬೇಕು ಎಂಬುದರ ಬಗ್ಗೆ ವಿವರ ನೀಡಲಾಗಿದೆ.
ಕೋವಿಡ್ ಸಾಂಕ್ರಾಮಿಕ ರೋಗ ಆಗಿರುವುದರಿಂದ ಮೃತಪಟ್ಟ ಕೂಡಲೇ, ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಬೇಕು.
ಕುಟುಂಬದ ಸದಸ್ಯರು ಪಾರ್ಥಿವ ಶರೀರವನ್ನು ನೋಡಲು ಇಚ್ಛಿಸಿದಲ್ಲಿ ಮುನ್ನೆಚ್ಚರಿಕೆಯ ಮಾನದಂಡದೊಂದಿಗೆ ಅವಕಾಶ ನೀಡಬೇಕು.
ಮೃತ ದೇಹ ದೀರ್ಘಕಾಲದವರೆಗೆ ಕೆಡದಂತೆ ಇಡಲು ಅವಕಾಶ ನೀಡಬಾರದು. ಮರಣೋತ್ತರ ಪರೀಕ್ಷೆ ಮಾಡಿದಲ್ಲಿ, ಸೋಂಕು ನಿಯಂತ್ರಣ ರಕ್ಷಾ ಕವಚವನ್ನು ಅಳವಡಿಸಬೇಕು.
ಮೃತ ದೇಹದ ಮುಂದೆ ಧಾರ್ಮಿಕ ಶ್ಲೋಕಗಳ ಪಠಣ, ಪವಿತ್ರ ಜಲ ಸಿಂಪರಣೆ,ಮೃತ ದೇಹಕ್ಕೆ ಸ್ನಾನ ಮಾಡಿಸುವುದು ಸೇರಿದಂತೆ ಇನ್ನಿತರೆ ಧಾರ್ಮಿಕ ವಿಧಿ ವಿಧಾನಗಳಿಗೆ ಅವಕಾಶ ಇರುವುದಿಲ್ಲ.
ಸುರಕ್ಷತಾ ಸಾಧನಗಳನ್ನು ಧರಿಸದಿದ್ದವರು ಮೃತದೇಹವನ್ನು ಸ್ಪರ್ಶಿಸದಂತೆ ನೋಡಿಕೊಳ್ಳಬೇಕು.
ಅಗ್ನಿಸ್ಪರ್ಶ ಮಾಡುವವರು, ಹೂಳುವ ಸಿಬ್ಬಂದಿ ಮತ್ತು ಕುಟುಂಬದ ಸದಸ್ಯರು ಅಂತ್ಯಸಂಸ್ಕಾರದ ಬಳಿಕ ತಮ್ಮ ಬಟ್ಟೆ ಹಾಗೂ ಕೈಗಳನ್ನು ಶುಚಿಗೊಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕು.
ಮೃತ ವ್ಯಕ್ತಿಯ ಅಸ್ಥಿಯಿಂದ ಯಾವುದೇ ಅಪಾಯವಿಲ್ಲ. ಹಾಗಾಗಿ ಸಂಗ್ರಹಿಸಲು ಅವಕಾಶ ನೀಡಬಹುದು.
ರೋಗ ಲಕ್ಷಣ ಇರದ ಕುಟುಂಬದ ಸದಸ್ಯರು ಭಾಗವಹಿಸಬಹುದು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಾಗಿಲ್ಲ. ಪರಸ್ಫರ ಅಂತರ ಕಾಯ್ದುಕೊಳ್ಳಬೇಕು.
ಕೆಲವೆಡೆ ಮೃತರ ಕುಟುಂಬದ ಸದಸ್ಯರು ಮುಂದೆ ಬರುತ್ತಿಲ್ಲ. ಅಂತಹ ಸಂದರ್ಭದಲ್ಲಿ ಅನಾಥ ಶವವನ್ನು ಸಿಬ್ಬಂದಿಯೇ ಮುಂದೆ ನಿಂತು ಅಂತ್ಯಕ್ರಿಯೆ ನಡೆಸಬೇಕಾಗುತ್ತಿದೆ – ಡಾ. ಓಂ ಪ್ರಕಾಶ್ ಪಾಟೀಲ್, ಆರೋಗ್ಯ ಇಲಾಖೆ ನಿರ್ದೇಶಕ