ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ, ವಾಲ್ಮೀಕಿ, ಕನಕ ಜಯಂತಿ ರಜೆ ರದ್ದು?

4ನೇ ಶನಿವಾರವೂ ರಜೆ: ಶಿಫಾರಸು
Last Updated 28 ಮೇ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ 4ನೇ ಶನಿವಾರವೂ ರಜೆ ನೀಡಲು ಸಚಿವ ಸಂಪುಟ ಉಪಸಮಿತಿ ಶಿಫಾರಸು ಮಾಡಿದೆ.

ಪ್ರಸ್ತುತ ಇರುವ ಸಾಂದರ್ಭಿಕ ರಜೆಗಳನ್ನು 15ರಿಂದ 12 ದಿನಗಳಿಗೆ ಇಳಿಸುವುದು. ಮಹಾವೀರ ಜಯಂತಿ, ಬಸವ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ, ಕನಕ ಜಯಂತಿ, ಕಾರ್ಮಿಕರ ದಿನಾಚರಣೆ, ಗುಡ್‌ಫ್ರೈಡೇ, ಮಹಾಲಯ ಅಮಾವಾಸ್ಯೆ, ಈದ್–ಮಿಲಾದ್ ಹಬ್ಬಕ್ಕೆ ನೀಡುತ್ತಿದ್ದ ಸಾರ್ವತ್ರಿಕ ರಜೆಗಳನ್ನು ರದ್ದುಪಡಿಸುವಂತೆ ಶಿಫಾರಸು ಮಾಡಲಾಗಿದೆ.

ರಜೆ ರದ್ದುಪಡಿಸಿದ ಜಯಂತಿಗಳು ಹಾಗೂ ಧಾರ್ಮಿಕ ಹಬ್ಬಗಳನ್ನು ನಿರ್ಬಂಧಿತ ರಜೆಯಾಗಿ ಘೋಷಿಸುವುದು. ದೀಪಾವಳಿ ಹಬ್ಬಕ್ಕೆ 1ನೇ ಹಾಗೂ 3ನೇ ದಿನ ನೀಡುತ್ತಿದ್ದ 2 ದಿನಗಳ ರಜೆಯನ್ನು 1ನೇ ಮತ್ತು 2ನೇ ದಿನ ನೀಡುವಂತೆ ಶಿಫಾರಸು ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ.

ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಹಾಗೂ ಆಡಳಿತ ಸುಧಾರಣೆಗೆ ಶಿಫಾರಸು ನೀಡಲು ರಚಿಸಲಾಗಿದ್ದ 6ನೇ ವೇತನ ಆಯೋಗವು ತನ್ನ ವರದಿಯಲ್ಲಿ ನೌಕರರ ಕೆಲಸದ ದಿನಗಳು ಹಾಗೂ ರಜಾ ದಿನಗಳನ್ನು ಪರಿಷ್ಕರಿಸುವಂತೆ ಶಿಫಾರಸು ಮಾಡಿತ್ತು. ಇದರ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿತ್ತು.

‘ಪ್ರತಿ ತಿಂಗಳ 4ನೇ ಶನಿವಾರವೂ ರಜೆ ನೀಡಿದರೆ ನೌಕರರಿಗೆ ಸಾಕಷ್ಟು ಸಹಕಾರಿಯಾಗಲಿದೆ. ಬ್ಯಾಂಕ್‌ಗಳು ಸಹ ರಜೆ ನೀಡುತ್ತಿವೆ. ಈಗಾಗಲೇ 2ನೇ ಶನಿವಾರ ರಜೆ ನೀಡಲಾಗುತ್ತಿದೆ. 4ನೇ ಶನಿವಾರ ರಜೆ ನೀಡಿದರೆ ಒಂದು ತಿಂಗಳಲ್ಲಿ ಎರಡು ಬಾರಿ ಒಟ್ಟಾಗಿ ಎರಡು ದಿನಗಳ ಕಾಲ ರಜೆ ಸಿಕ್ಕಂತಾಗುತ್ತದೆ. ಇದರಿಂದ ನೌಕರರ ತೃಪ್ತಿಯ ಮಟ್ಟ ಹೆಚ್ಚಲಿದ್ದು, ಕಾರ್ಯಕ್ಷಮತೆಯಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ’ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT