ಹಾಸನ: ‘ಸಿಎಎ ಕಾಯ್ದೆ ಜಾರಿಯಿಂದ ಮುಸ್ಲಿಮರಿಗೆ ಮಾತ್ರವಲ್ಲ ಹಿಂದೂಗಳಿಗೂ ತೊಂದರೆಯಿದೆ. ಆದರೆ, ಇದರ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಲು ಜೆಡಿಎಸ್ ಪಕ್ಷದಲ್ಲಿ ಇರುವುದು ಇಬ್ಬರೇ ಸಂಸದರು’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.
ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಹಾಸನಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಎ ಪ್ರತಿಭಟನಕಾರರ ವಿರುದ್ಧ ಗುಂಡು ಹಾರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಪರಸ್ಪರ ಕೂತು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದರು.
ಮುಸ್ಲಿಂ ಜನಾಂಗದವರನ್ನು ಬಿಟ್ಟು ಕಾಯ್ದೆ ರೂಪಿಸಲಾಗಿದೆ. ಅಸ್ಸಾಂನಲ್ಲಿ ಬುಡಕಟ್ಟು ಜನಾಂಗ ವಾಸಿಸುತ್ತಿದ್ದು ಎನ್ಆರ್ಸಿ ಕಾಯ್ದೆ ಜಾರಿಗೊಳಿಸಿದರೆ ಅವರಿಗೆ ತೊಂದರೆ ಉಂಟಾಗಲಿದೆ. ಸಮಸ್ಯೆ ಬಗ್ಗೆ ನಾನು ಪ್ರಧಾನಿಯಾಗಿದ್ದಾಗಿನಿಂದಲೂ ಅರಿವಿದೆ ಎಂದು ಹೇಳಿದರು.
‘ನನ್ನ ಅವಧಿಯಲ್ಲಿ ಮುಸ್ಲಿಮರ ಅನೇಕ ಸಮಸ್ಯೆಗಳನ್ನು ಬಗೆಹರಿಸಲಾಗಿತ್ತು. ಅನೇಕರನ್ನು ಬಿಬಿಎಂಪಿ ಸದಸ್ಯರನ್ನಾಗಿ ಮಾಡಿದ್ದೇನೆ. ಆದರೆ, ಚುನಾವಣಾ ಸಂದರ್ಭದಲ್ಲಿ ರಾಹುಲ್ ಗಾಂಧಿ ನಮ್ಮನ್ನು ಬಿಜೆಪಿ ಬಿ ಟೀಮ್ ಎಂದರು. ಇದರಿಂದ ಮತಗಳಿಗೆಯಲ್ಲಿ ವ್ಯತ್ಯಾಸ ಉಂಟಾಯಿತು’ ಎಂದು ಹೇಳಿದರು.
ನನಗೆ ರಾಜಕೀಯದಲ್ಲಿ 60 ವರ್ಷಗಳ ಅನುಭವವಿದೆ. ಆ ಅನುಭವದಿಂದಲೇ ಪಕ್ಷ ಸಂಘಟಿಸುವ ಕೆಲಸವನ್ನು ಕೊನೆವರೆಗೂ ಮಾಡುತ್ತೇನೆ ಎಂದು ಹೇಳಿದರು.
ಇನ್ನೂ ಬಜೆಟ್ ಪ್ರತಿ ಓದಿಲ್ಲ ಓದಿದ ಬಳಿಕ ಮಾತನಾಡುತ್ತೇನೆ ಎಂದು ಹೇಳಿದರು.