ಬಾಗಲಕೋಟೆ: ಉಪಚುನಾವಣೆ ಬಳಿಕ ಮತ್ತೆ ಆಪರೇಷನ್ ಕಮಲ ಮಾಡಲು ಮುಂದಾದರೆ ಜನ ಬಿಜೆಪಿಯವರನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬಾದಾಮಿ ತಾಲ್ಲೂಕಿನ ಕೆರೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಏಕಾಂಗಿ ಎಂಬುದೆಲ್ಲಾ ಸುಳ್ಳು. ಬಿಜೆಪಿಯವರು ಪ್ರಚಾರಕ್ಕಾಗಿ ಹಾಗೆ ಹೇಳುತ್ತಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಕಿಲ್ಲ. ಅದು ಬಿಜೆಪಿಯ ಅಪಪ್ರಚಾರ. ಲಕ್ಷಾಂತರ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ ಎಂದರು.
ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತರುತ್ತೇವೆ ಎಂಬ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, 'ಅವನ್ಯಾರೊ ರಮೇಶ್(ರಮೇಶ ಜಾರಕಿಹೊಳಿ). ಅವರಿಗೆ ಐಡಿಯಾಲಜಿ ಗೊತ್ತಿಲ್ಲ. ಪೊಲಿಟಿಕಲ್ ಫಿಲಾಸಫಿ ಗೊತ್ತಿಲ್ಲ. ಏನೂ ಗೊತ್ತಿಲ್ಲ. ಬಾಯಿಗೆ ಬಂದಂಗೆ ಮಾತನಾಡುತ್ತಾರೆ'. ಜವಾಬ್ದಾರಿಯಿದ್ದರೆ ಹೀಗೆಲ್ಲ ಮಾತನಾಡುವದಿಲ್ಲ. ರಾಜಕಾರಣದಲ್ಲಿ ಹುಡುಗಾಟಿಕೆ ಆಡಬಾರದು. ನಮ್ಮ ಜೀವನದ ಹೋರಾಟವೇ ಕೋಮುವಾದಿ ಶಕ್ತಿ ವಿರುದ್ಧ. ಹಾಗಾಗಿ ಗಂಭೀರವಾಗಿ ಮಾತನಾಡುವುದನ್ನು ಕಲಿಯಬೇಕು ಎಂದು ಹೇಳಿದರು.
'ಏನೇ ತೀರ್ಮಾನ ಆಗಬೇಕಾದರೂ ಫಲಿತಾಂಶ ಬರಬೇಕು. ಆಮೇಲೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ನೋಡೋಣ. ಈಗಲೇ ಚರ್ಚೆ ಮಾಡಿದರೆ ಹೇಗೆ? ನಮಗೊಂದು ಹೈಕಮಾಂಡ್ ಇದೆ ಎಂದು ದಲಿತ ಸಿಎಂ ಆಗಿ ಮಲ್ಲಿಕಾರ್ಜುನ ಖರ್ಗೆಗೆ ಅವಕಾಶದ ಬಗ್ಗೆ ಮಾತನಾಡಿದರು.
ನಾವು ಉಪಚುನಾವಣೆಯಲ್ಲಿ 10 ಸೀಟು ಗೆಲ್ಲಬೇಕು. 5 ಸೀಟು ಗೆದ್ದರೆ ಬಿಜೆಪಿಗೆ 112 ಸ್ಥಾನ ಆಗುತ್ತದೆ. ಕಾಂಗ್ರೆಸ್ 10, ಜೆಡಿಎಸ್ ಒಂದು, ಎರಡು ಗೆಲ್ಲಬೇಕು. ಆಗ ಚರ್ಚೆಗೆ ಬರುತ್ತದೆ. ಇನ್ನು ಫಲಿತಾಂಶವೇ ಬಂದಿಲ್ಲ ಈಗಲೇ ಚರ್ಚೆ ಮಾಡಿದರೆ ಹೇಗೆ? ಈಗಲೇ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದರು.