ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತ ಹೇಮಂತ್ ಕುಮಾರ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್

Last Updated 30 ಏಪ್ರಿಲ್ 2019, 8:52 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿರುವ ಆರೋಪದಡಿ ಮೂರು ದಿನಗಳ ಕಾಲ ಪೊಲೀಸ್ ವಶದಲ್ಲಿದ್ದ ಪತ್ರಕರ್ತ ಹೇಮಂತ್‌ ಕುಮಾರ್‌ಅವರನ್ನು ಜನಪ್ರತಿನಿಧಿಗಳ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಮೂರು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮಂಗಳವಾರ ಮುಕ್ತಾಯಗೊಂಡ ಕಾರಣ ಸಿಐಡಿ ಪೊಲೀಸರು ಹೇಮಂತ್ ಕುಮಾರ್ ಅವರನ್ನು "ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ"ಕ್ಕೆ ಬೆಳಿಗ್ಗೆ ಹಾಜರುಪಡಿಸಿದರು.

ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು ಆರೋಪಿ ಹೇಮಂತ್ ಕುಮಾರ್ ಅವರಿಗೆ "ನಿಮ್ಮ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಆಕ್ಷೇಪಣೆ ಸಲ್ಲಿಸಬೇಕಿದೆ. ಅಂತೆಯೇ ಜಾಮೀನು ಅರ್ಜಿಯ ವಿಚಾರಣೆಯೂ ನಡೆಯಬೇಕಿದೆ. ಆದ್ದರಿಂದ ಮೇ 9ರವರೆಗೆ ನ್ಯಾಯಾಂಗ ನಿಮ್ಮನ್ನು ಬಂಧನಕ್ಕೆ ನೀಡಲಾಗುತ್ತಿದೆ" ಎಂದು ಆದೇಶಿಸಿದರು.

ಜಾಮೀನು ಅರ್ಜಿಯ ವಿಚಾರಣೆ ಮೇ 2ರಂದು ನಡೆಯಲಿದೆ.

ಪ್ರಕರಣವೇನು?:

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಎಂ.ಬಿ.ಪಾಟೀಲ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಿಎಲ್‌ಡಿಇ ಸಂಸ್ಥೆಯ ಲೆಟರ್ ಹೆಡ್‌ನಲ್ಲಿ ಬರೆದಿದ್ದರು ಎನ್ನಲಾದ ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಯೊಂದರಲ್ಲಿ (ಪ್ರಜಾವಾಣಿ ಅಲ್ಲ) ಪ್ರಕಟ ಮಾಡಲಾಗಿತ್ತು.

ಈ ಕುರಿತು ಎಂ.ಬಿ.ಪಾಟೀಲರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರ ತನಿಖೆಯನ್ನು ಸಿಐಡಿ ಪೊಲೀಸರು ನಡೆಸುತ್ತಿದ್ದು ಪೊಲೀಸರು "ಪೋಸ್ಟ್‌ ಕಾರ್ಡ್‌ ವೆಬ್‌ಪೋರ್ಟಲ್‌" ಸಂಪಾದಕ ಮಹೇಶ್‌ ವಿಕ್ರಂ ಹೆಗ್ಡೆಯನ್ನು ವಿಚಾರಣೆಗೆ ಒಳಪಡಿಸಿದ್ದರು.

ವಿಚಾರಣೆ ವೇಳೆ ಹೆಗ್ಡೆ ನೀಡಿದ ಮಾಹಿತಿಯ ಆಧಾರದಲ್ಲಿ ಸಿಐಡಿ ಪೊಲೀಸರು ಎಸ್‌.ಎ.ಹೇಮಂತ್‌ ಕುಮಾರ್‌ ಅವರನ್ನು ಏ.27ರಂದು ವಶಕ್ಕೆ ಪಡೆದಿದ್ದರು.

ಹೇಮಂತ್ ಕುಮಾರ್ ಅವರನ್ನು ನ್ಯಾಯಾಲಯದ ಮುಂದೆ ಶನಿವಾರ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ವಶಕ್ಕೆ ಒಪ್ಪಿಸವಂತೆ ಮನವಿ ಮಾಡಿದ್ದರು.

ಇದನ್ನು ಮಾನ್ಯ ಮಾಡಿದ್ದ ನ್ಯಾಯಾಧೀಶ ಹುದ್ದಾರ ಅವರು ಆರೋಪಿ ಹೇಮಂತ್ ಕುಮಾರ್ ಅವರನ್ನು ಏ.30ರವರೆಗೆ ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿದ್ದರು.

ತಲೆ ಎತ್ರೀ...!

ಈ ಮೊದಲು ಹಾಜರಾದ ವೇಳೆ ಹೇಮಂತ್ ಕುಮಾರ್ ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ಎದೆಯುಬ್ಬಿಸಿ ಗಟ್ಟಿ ದನಿಯಲ್ಲಿ ಉತ್ತರಿಸಿದ್ದರು. ಆ ದಿನ ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶಿಸಲಾಗಿತ್ತು.

ಮಂಗಳವಾರ ಬೆಳಗ್ಗೆ 11.45ರ ವೇಳೆಯಲ್ಲಿ ವಿಚಾರಣೆಗೆ ಕೂಗಿದಾಗ ಕೋರ್ಟ್ ಹಾಲ್ ಒಳಗೆ ಬಂದ ಹೇಮಂತ್ ಕುಮಾರ್ ಪೂರ್ಣ ತಲೆ ತಗ್ಗಿಸಿ ನಿಂತಿದ್ದರು. ಇದನ್ನು ಗಮನಿಸಿದ ನ್ಯಾಯಾಧೀಶ ಹುದ್ದಾರ ಅವರು ತಲೆ ಎತ್ರೀ...ಎಂದರು. ಆಗ ಹೇಮಂತ್ ಕುಮಾರ್ ಸ್ವಲ್ಪ ತಲೆ ಎತ್ತಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT