ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಬೃಹನ್ನಾಟಕಕ್ಕೆ ಶಕ್ತಿಸೌಧ ದಂಗು

ಅಚ್ಚರಿ ಮೂಡಿಸಿದ ಗೋಪಾಲಯ್ಯ, ರಾಮಲಿಂಗಾರೆಡ್ಡಿ, ಬೈರತಿ ಬಸವರಾಜ ತಂಡ
Last Updated 6 ಜುಲೈ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌–ಜೆಡಿಎಸ್‌ನ 12 ಮಂದಿ ಶಾಸಕರು ಏಕಾಏಕಿ ರಾಜೀನಾಮೆ ಸಲ್ಲಿಸಲು ಶನಿವಾರ ಶಕ್ತಿಸೌಧಕ್ಕೆ ಸಾಲುಸಾಲಾಗಿ ದಾಂಗುಡಿ ಇಡುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಕೋಲಾಹಲವೇ ಸೃಷ್ಟಿಯಾಯಿತು. ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದ ಸನ್ನಿವೇಶ ಇಡೀ ರಾಜ್ಯದ ಜನರ ದೃಷ್ಟಿಯನ್ನು ವಿಧಾನಸೌಧದತ್ತ ಸೆಳೆಯಿತು.

ಕಾಂಗ್ರೆಸ್‌ನ ಆನಂದ ಸಿಂಗ್‌ ರಾಜೀನಾಮೆ ಸಲ್ಲಿಸಿದ ಬಳಿಕ ಮತ್ತಷ್ಟು ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹರಡಿತ್ತು. ಶನಿವಾರವೂ ಅದೇ ಮಾತುಗಳು ಹರಿದಾಡುತ್ತಿದ್ದವು.

ವಿಧಾನಸಭಾ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಬೆಳಿಗ್ಗೆ 11.20ರ ಸುಮಾರಿಗೆ ತಮ್ಮ ಕಚೇರಿಗೆ ಬಂದಿದ್ದರು. ಇದನ್ನು ಅರಿತ ಅತೃಪ್ತ ಶಾಸಕರು ವಿಧಾನಸೌಧದತ್ತ ದೌಡಾಯಿಸಿದರು. ‘ನಾನು ಸಂತೆಯಲ್ಲಿ ಕೂತಿಲ್ಲ, 13 ಅಲ್ಲ 30 ಜನ ಬರಲಿ, ಸ್ಪೀಕರ್‌ ಭೇಟಿ ಮಾಡಲು ಇದೆ..’ ಎಂದು ರಮೇಶ್‌ಕುಮಾರ್ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಮೊದಲಿಗೆ ಎಂಟು ಮಂದಿ ಶಾಸಕರು ಅತ್ತ ಮುಖ ಮಾಡಿದ್ದರು!

ಶಾಸಕರು ಬರುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ವಿಧಾನಸಭಾ ಅಧ್ಯಕ್ಷರು ತಮ್ಮ ಕಚೇರಿಯಿಂದ ಹೊರಗೆ ಧಾವಿಸಿ ಬಂದರು. ಹಜಾರದಲ್ಲಿ ಬಂದು ಪಶ್ಚಿಮ ಭಾಗದ ಮೆಟ್ಟಿಲು ಇಳಿಯುತ್ತಿದ್ದಂತೆಯೇ ಪೂರ್ವ ಭಾಗದಿಂದ ಎಚ್‌.ವಿಶ್ವನಾಥ್‌ ನೇತೃತ್ವದಲ್ಲಿ ಏಳು ಮಂದಿ ಶಾಸಕರು ಪೂರ್ವ ಭಾಗದ ಮೆಟ್ಟಿಲು ಹತ್ತುತ್ತಿದ್ದರು. ಕೇವಲ ನಾಲ್ಕೈದುನಿಮಿಷದ ಅಂತರದಲ್ಲಿ ಈ ಎಂಟು ಮಂದಿ ಶಾಸಕರಿಗೆ ಸಭಾಧ್ಯಕ್ಷರ ಭೇಟಿ ಕೈ ತಪ್ಪಿ ಹೋಯಿತು.

ವಿಧಾನಸಭಾ ಅಧ್ಯಕ್ಷರು ಹೊರಟು ಹೋಗಿದ್ದಾರೆ, ಕುಳಿತುಕೊಳ್ಳಿ ಎಂದುಸಚಿವಾಲಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಹೇಳುತ್ತಿದ್ದಂತೆಯೇ ವಿಶ್ವನಾಥ್‌ ನೇತೃತ್ವದಲ್ಲಿ ಬಂದ ರಮೇಶ ಜಾರಕಿಹೊಳಿ, ಬಿ.ಸಿ.ಪಾಟೀಲ, ಶಿವರಾಮ ಹೆಬ್ಬಾರ್‌, ಮಹೇಶ್‌ ಕುಮಠಳ್ಳಿ, ಪ್ರತಾಪಗೌಡ ಪಾಟೀಲ, ನಾರಾಯಣ ಗೌಡ ಮತ್ತು ಕೆ.ಗೋಪಾಲಯ್ಯ ಅವರು ಅಲ್ಲೇ ಕುಳಿತರು.

ಮಧ್ಯಾಹ್ನ 1.20ರ ವೇಳೆಗೆ ಕಚೇರಿಗೆ ಕಾಂಗ್ರೆಸ್‌ ಶಾಸಕರಾದ ಎಸ್.ಟಿ.ಸೋಮಶೇಖರ್‌, ಮುನಿರತ್ನ ಮತ್ತು ಬೈರತಿ ಬಸವರಾಜ ಬಂದರು. ‘ನಾವು ಶಾಸಕರ ಮನವೊಲಿಸಲು ಬಂದಿದ್ದೇವೆ’ ಎಂದು ಹೇಳುತ್ತಲೇ ಒಳಗೆ ಹೋಗಿದ್ದರು. ಮಧ್ಯಾಹ್ನ 1.35ಕ್ಕೆ ರಾಮಲಿಂಗಾ ರೆಡ್ಡಿ ಸಹ ಕಚೇರಿಗೆ ಬಂದುಬಿಟ್ಟರು.ಅಲ್ಲಿಗೆ ಶಾಸಕರ ಸಂಖ್ಯೆ 12ಕ್ಕೆ ಏರಿತ್ತು.‌

1.50ರ ವೇಳೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸಹ ಧಾವಿಸಿ ಬಂದರು. ಒಳಗಡೆ ಆಗ ರಾಜೀನಾಮೆ ಸಲ್ಲಿಕೆಯ ಬಿರುಸಿನ ಚರ್ಚೆ ನಡೆದಿತ್ತು. ವಿಶ್ವನಾಥ್‌ ನೇತೃತ್ವದಲ್ಲಿ ಬಂದ ಶಾಸಕರು ಆಗಲೇ ಸ್ಪೀಕರ್‌ ಅವರ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಸಲ್ಲಿಸಿದರು. 2.10ರ ಸುಮಾರಿಗೆ ಆ ಎಂಟೂ ಮಂದಿ ಕಚೇರಿಯಿಂದ ಹೊರಗಡೆ ಬಂದರು. ಅವರು ನೇರವಾಗಿ ಹೋದುದು ರಾಜಭವನಕ್ಕೆ.

2.30ಕ್ಕೆ ಡಿ.ಕೆ.ಶಿವಕುಮಾರ್‌ ಮತ್ತು ಇತರ ನಾಲ್ವರು ಶಾಸಕರು ಸ್ಪೀಕರ್ ಕಚೇರಿಯಿಂದ ಹೊರಬಂದರು. ಅವರು ಸಚಿವರ ಕ್ವಾರ್ಟರ್ಸ್‌ಗೆ ತೆರಳಿದರು. ಅಲ್ಲಿ ಮತ್ತೆ ಶಾಸಕರ ಮನವೊಲಿಸುವ ಪ್ರಯತ್ನ ನಡೆಯಿತು. ಆದರೆ ಇದಕ್ಕೆ ಒಪ್ಪದ ಮುನಿರತ್ನ ಅವರು ಸೋಮಶೇಖರ್‌ ಜತೆಗೆ ಮತ್ತೆ ಸಂಜೆ 4 ಗಂಟೆಗೆ ಸ್ಪೀಕರ್ ಕಚೇರಿಗೆ ಬಂದು ರಾಜೀನಾಮೆ ಸಲ್ಲಿಸಿದರು.

ಸಂಜೆ 5 ಗಂಟೆಗೆ ಸಚಿವಾಲಯ ಕಾರ್ಯದರ್ಶಿ ರಾಜಭವನಕ್ಕೆ ತೆರಳಿದರು. ರಾಜೀನಾಮೆ ನೀಡಿದ ಶಾಸಕರ ಸಹಿಯನ್ನು ದೃಢಪಡಿಸುವುದು ಹಾಗೂ ಸಚಿವ ಶಿವಕುಮಾರ್‌ ಅವರು ಮುನಿರತ್ನ ಅವರ ರಾಜೀನಾಮೆ ಪತ್ರ ಹರಿದ ಪ್ರಸಂಗದ ಬಗ್ಗೆ ಮಾಹಿತಿ ನೀಡುವುದು ಇದರ ಉದ್ದೇಶವಾಗಿತ್ತು.

‘ಇನ್ನೂ ಸುಮಾರು 10 ಮಂದಿ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ’ ಎಂಬ ಗುಸು ಗುಸುಸಂಜೆ ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿಬರುತ್ತಿತ್ತು. ಆಗಲೇ ಶಾಸಕರೆಲ್ಲ ಎಚ್‌ಎಎಲ್‌ ವಿಮಾನನಿಲ್ದಾಣದಲ್ಲಿ ವಿಶೇಷ ವಿಮಾನ ಏರುತ್ತಿದ್ದರು.

ಮುನಿರತ್ನ ರಾಜೀನಾಮೆ ಪತ್ರ ಹರಿದ ಡಿಕೆಶಿ

ಶನಿವಾರ ಮಧ್ಯಾಹ್ನ 2.20ರ ಸುಮಾರಿಗೆ ವಿಧಾನಸಭಾ ಅಧ್ಯಕ್ಷರ ಕಚೇರಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮನವೊಲಿಕೆಗೆ ಒಪ್ಪದ ನಾಲ್ವರು ಶಾಸಕರು ಸಚಿವಾಲಯ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಲು ಮುಂದಾದರು. ಆಗ ಸಚಿವ ಶಿವಕುಮಾರ್ ಅವರು ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಹರಿದು ಹಾಕಿದರು. ಹೀಗಾಗಿ ಆಗ ಮೂವರಷ್ಟೇ ರಾಜೀನಾಮೆ ಸಲ್ಲಿಸುವುದು ಸಾಧ್ಯವಾಯಿತು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT