ಚಿತ್ರದುರ್ಗ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕನ್ನಡ ಸೇರಿ ಎಲ್ಲ ಪ್ರಾದೇಶಿಕ ಭಾಷೆಗಳು ಅಭದ್ರತೆಯನ್ನು ಎದುರಿಸುತ್ತಿವೆ. ಹಿಂದಿಯೇತರ ಭಾಷೆಗಳ ಮೇಲೆ ಕೇಂದ್ರ ಸರ್ಕಾರ ಹಲ್ಲೆ ನಡೆಸುತ್ತಿದೆ ಎಂದು ಕಾದಂಬರಿಕಾರ ಕುಂ.ವೀರಭದ್ರಪ್ಪ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ತೆಗೆದುಕೊಳ್ಳುವ ನಿಲುವುಗಳ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಹಿಂದಿ ಭಾಷೆ ಹೇರಿಕೆಗೆ ಪ್ರಯತ್ನಿಸುತ್ತಿದೆ. ಈ ಮೂಲಕ ಪ್ರಾದೇಶಿಕ ಭಾಷೆಗಳ ಮೇಲೆ ಹಲ್ಲೆ ನಡೆಸುವ ಹುನ್ನಾರ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸರ್ವಾಧಿಕಾರಿ ಶಕ್ತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರವೇಶಿಸುತ್ತಿವೆ. ಸಂವಿಧಾನಕ್ಕೆ ದಕ್ಕೆ ತರುವ ಕೆಲಸವನ್ನು ಬಿಜೆಪಿಯ ಹಲವು ಸಂಸದರು ಮಾಡುತ್ತಿದ್ದಾರೆ. ಕಮಲ ಪಕ್ಷದಿಂದ ದೇಶದ ಆಡಳಿತ ವ್ಯವಸ್ಥೆ ಬುಡಮೇಲಾಗುತ್ತಿದೆ. ಕಮಲಕ್ಕೆ ಸನಾತನ ಮೌಲ್ಯಗಳ ಕೀಟನಾಶಕವನ್ನು ಸಿಂಪಡಿಸಲಾಗುತ್ತಿದೆ. ಹೀಗಾಗಿ, ಇದು ಕ‘ಮಲ’ವಾಗಿದ್ದು, ದೇಶದ ಆರೋಗ್ಯವನ್ನು ಹಾಳು ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಹಿಂದಿ ಹೇರಿಕೆ ಸಹಿಸಲಾಗದು: ಸಿದ್ದರಾಮಯ್ಯ
‘ದಕ್ಷಿಣ ಭಾರತದ ಮೇಲೆ ಹಿಂದಿ ಹೇರುವ ಪ್ರಯತ್ನ ಲಾಲ್ ಬಹದ್ದೂರು ಶಾಸ್ತ್ರಿ ಕಾಲದಿಂದಲೂ ನಡೆಯುತ್ತಿದೆ. ಬ್ಯಾಂಕುಗಳಲ್ಲಿ ಕನ್ನಡೇತರರು ಹೆಚ್ಚಾಗಿ ನೇಮಕಗೊಳ್ಳುತ್ತಿದ್ದಾರೆ. ಅಡುಗೆ ಮನೆಯ ಭಾಷೆಯನ್ನು ಪಡಸಾಲೆ ಭಾಷೆ ಆಕ್ರಮಣ ಮಾಡಲು ಬಿಡಬಾರದು’ ಎಂದು ಹೇಳಿದರು.
‘ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶುರು ಮಾಡಿದ ರಾಜ್ಯ ಸರ್ಕಾರದ ಕ್ರಮ ಕೂಡ ಖಂಡನೀಯ. ಕನ್ನಡ ಭಾಷೆಯ ಮೇವು, ಆಮ್ಲಜನಕವನ್ನು ಇನ್ನೊಂದು ಭಾಷೆ ಕಸಿಯಬಾರದು. ಭೂರಹಿತರಿಗೆ ಭೂಮಿ ಹಂಚಿಕೆ ಮಾಡದ ಸರ್ಕಾರ, ಜಿಂದಲ್ ಕಂಪನಿಗೆ ಸಾವಿರಾರು ಎಕರೆ ಭೂಮಿ ಹಸ್ತಾಂತರಿಸಿದ ರೀತಿ ಕೂಡ ಸರಿಯಲ್ಲ’ ಎಂದು ಆಕ್ಷೇಪ ಹೊರಹಾಕಿದರು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.