ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನಗಳಲ್ಲಿ 2.3 ಲಕ್ಷ ಮಂದಿ ಭೇಟಿ

‘ವಿವೇಕ’ ಫಲಪುಷ್ಪ ಪ್ರದರ್ಶನ ಸಂಪನ್ನ l ಕೊನೆ ದಿನ ಜನಸಾಗರ
Last Updated 26 ಜನವರಿ 2020, 20:06 IST
ಅಕ್ಷರ ಗಾತ್ರ

ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಭಾನುವಾರ ಸಂಪನ್ನಗೊಂಡಿತು. ಈ ಬಾರಿ 15 ದಿನಗಳಲ್ಲಿ ಒಟ್ಟು 2.30 ಲಕ್ಷ ಮಂದಿ ಈ ಹೂಗಳ ಸೊಬಗನ್ನು ಕಣ್ತುಂಬಿಕೊಂಡರು.

ಜ.11ರಿಂದ ಆರಂಭವಾದ ಪ್ರದರ್ಶನಕ್ಕೆ ವೀಕ್ಷಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಸಾಗಿತು. ಪ್ರದರ್ಶನದ ಕೊನೆಯ ದಿನವಾದಭಾನುವಾರ ಅತಿ ಹೆಚ್ಚು (85,500) ಮಂದಿ ಭೇಟಿ ನೀಡಿದರು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರದರ್ಶನ ವೀಕ್ಷಿಸಿದವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ 4.2 ಲಕ್ಷ ಮಂದಿ ಭೇಟಿ ನೀಡಿದ್ದರು. ಕೊನೆಯ ದಿನ ಒಟ್ಟು 78 ಸಾವಿರ ಮಂದಿ ಪ್ರದರ್ಶನಕ್ಕೆ ಬಂದಿದ್ದರು.

‘ಈ ಬಾರಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲು ನಿಖರ ಕಾರಣ ತಿಳಿಯುತ್ತಿಲ್ಲ. ಪ್ರಚಾರ ಕಡಿಮೆ
ಯಾಯಿತೋ, ಅಥವಾ ಜನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಆದರೆ, ಕೊನೆಯ ಎರಡು ದಿನ ಪ್ರವಾಸಿಗರ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚು ಇತ್ತು’ ಎಂದು ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘ ಆಯೋಜಿಸಿದ್ದ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಸ್ವಾಮಿ ವಿವೇಕಾನಂದರಿಗೆ ಅರ್ಪಿಸಲಾಯಿತು. ಲಾಲ್‌ಬಾಗ್‌ ಗಾಜಿನ ಮನೆಯ ಹೃದಯ ಭಾಗದಲ್ಲಿಸಿದ್ಧಪಡಿಸಲಾಗಿದ್ದ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದರ ಸ್ಮಾರಕದ ಮಾದರಿ ಫಲಪುಷ್ಪ ಪ್ರದರ್ಶನದ ಕೇಂದ್ರಬಿಂದುವಾಗಿತ್ತು.75 ಸಾವಿರ ಕೆಂಪು, ಬಿಳಿ, ಹಳದಿ ಗುಲಾಬಿ, 75 ಸಾವಿರ ಸೇವಂತಿಗೆ ಹಾಗೂ 3 ಸಾವಿರ ವಿವಿಧ ಎಲೆಗಳನ್ನು ಬಳಸಿ ನಿರ್ಮಿಸಲಾಗಿದ್ದ ಸ್ಮಾರಕವನ್ನು ಜನ ಕುತೂಹಲದಿಂದ ವೀಕ್ಷಿಸಿದರು.

ವಿವೇಕಾನಂದರ ಷಿಕಾಗೊ ಭಾಷಣದ ಸಂದರ್ಭ
ವನ್ನುಉದ್ಯಾನದ ಪ್ರವೇಶದ್ವಾರ ಬಲಭಾಗದಲ್ಲಿ ಹೂಗಳಲ್ಲಿ ನಿರ್ಮಿಸಲಾಗಿತ್ತು. ಇದು ಕೂಡಾ ಜನರನ್ನು ಆಕರ್ಷಿಸಿತ್ತು. ಗಾಜಿನ ಮನೆಯ ತುಂಬ ವಿವೇಕಾನಂದರ ಪ್ರತಿಮೆಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಭಾನುವಾರ ಗಾಜಿನ ಮನೆಯೊಳಗೆ ಕೊಂಚ ನೂಕುನುಗ್ಗಲು ಇತ್ತು.

ಸಂಜೆ 3 ಗಂಟೆ ನಂತರ ಉದ್ಯಾನದತ್ತ ಹೆಚ್ಚು ಜನ ಮುಖ ಮಾಡಿದರು. ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹೆಚ್ಚು ಜನ ಬಂದ ಹಿನ್ನೆಲೆಯಲ್ಲಿ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಜನ ಸಾಲುಗಟ್ಟಿ ನಿಂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT