ಬೆಂಗಳೂರು:ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ನನ್ನು ಶನಿವಾರ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇದೇ 23ರ ವರೆಗೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ.
ಬೆಳಗ್ಗೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮನ್ಸೂರ್ ಖಾನ್ನನ್ನು ದೆಹಲಿಯಿಂದ ಬೆಂಗಳೂರಿಗೆ ಕರೆತಂದಿದ್ದರು.
ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮನ್ಸೂರ್ ಖಾನ್ ಅವರ ಮನವೊಲಿಸಿ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಏರ್ ಇಂಡಿಯಾ (AI–916) ವಿಮಾನದಲ್ಲಿ ಬೆಳಗಿನ ಜಾವ 1.50ಕ್ಕೆ ದೆಹಲಿಗೆ ಕರೆತರುತ್ತಿದ್ದಂತೆ, ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದು ನಿನ್ನೆ ವಿಚಾರಣೆ ನಡೆಸಿದ್ದರು.
ಶನಿವಾರ ಬೆಳಗ್ಗೆ ಬೆಂಗಳೂರಿಗೆ ಕರೆತಂದಿರುವ ಇ.ಡಿ. ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದರು.ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯ ಇದೇ 23ರವರೆಗೂ ಮನ್ಸೂರ್ ಖಾನ್ನನ್ನುಇ.ಡಿ. ವಶಕ್ಕಕೆ ನೀಡಿತು.
ಇ.ಡಿ.ಅಧಿಕಾರಿಗಳ ವಿಚಾರಣೆ ಬಳಿಕಮೊಹಮ್ಮದ್ ಮನ್ಸೂರ್ ಖಾನ್ನನ್ನುಎಸ್ಐಟಿಗೆ ಒಪ್ಪಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:‘ಮೌಲ್ವಿ’ ಮಗ ಮನ್ಸೂರ್ ಕೋಟ್ಯಧಿಪತಿಯಾದ!
ಸ್ಫೋಟಕ ಮಾಹಿತಿ ನಿರೀಕ್ಷೆ
ಐಎಂಎ ಸಮೂಹ ಕಂಪನಿಗಳನ್ನು ಬಂದ್ ಮಾಡಿಮನ್ಸೂರ್ ಖಾನ್ ಪರಾರಿಯಾದ ಬಳಿಕ ಆಡಿಯೊ ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ತಮ್ಮಿಂದ ಹಣ ಪಡೆದ ಕೆಲವರ ಹೆಸರನ್ನು ಬಹಿರಂಗಪಡಿಸಿದ್ದರು. ಆನಂತರ ಬಿಡುಗಡೆ ಮಾಡಿದ್ದ ಇನ್ನೊಂದು ಆಡಿಯೋದಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳಿದ್ದವು.
ಈಚೆಗೆ ಬಿಡುಗಡೆ ಮಾಡಿದ್ದ ಆಡಿಯೊದಲ್ಲಿ ಖಾನ್ ಭಾರತಕ್ಕೆ ಹಿಂತಿರುಗುವ ಇಚ್ಛೆ ವ್ಯಕ್ತಪಡಿಸಿದ್ದರು. ಬೆಂಗಳೂರಿಗೆ ಮರಳಿದ ಬಳಿಕ ತಮ್ಮಿಂದ ಹಣ ಪಡೆದ ರಾಜಕಾರಣಿಗಳು, ಅಧಿಕಾರಿಗಳ ಹೆಸರನ್ನು ಕೋರ್ಟ್ ಮತ್ತು ಎಸ್ಐಟಿ ಅಧಿಕಾರಿಗಳ ಮುಂದೆ ಬಹಿರಂಗಪಡಿಸುವುದಾಗಿಯೂ ಹೇಳಿದ್ದರು.
ಖಾನ್ ಈಗ ಹೊಸ ಹೆಸರುಗಳನ್ನು ಬಹಿರಂಗಪಡಿಸಬಹುದೆಂದು ನಿರೀಕ್ಷಿಸಲಾಗಿದೆ. ಹಾಗೇನಾದರೂ ಆದಲ್ಲಿ ಇನ್ನಷ್ಟು ‘ತಲೆ ದಂಡ’ ಆಗಬಹುದು ಎಂದು ಭಾವಿಸಲಾಗಿದೆ.
ಇವನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.