ಮೈಸೂರು: ದೊರೆಸ್ವಾಮಿ ಅವರು ಪಾಕಿಸ್ತಾನದ ಏಜೆಂಟ್, ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಟೀಕಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಮೈಸೂರು ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಮಂಡಿಸಲಾಗಿದೆ.
ಕಾಂಗ್ರೆಸ್–ಜೆಡಿಎಸ್ ಆಡಳಿತವಿರುವ ಪಾಲಿಕೆಯಲ್ಲಿ ಮಂಡನೆಯಾದ ಈ ನಿರ್ಣಯವನ್ನು ಬಿಜೆಪಿ ವಿರೋಧಿಸಿದೆ. ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ವಿರುದ್ಧ ನೀಡಲಾದ ಹೇಳಿಕೆ ಕುರಿತು ಚರ್ಚೆ ಆಗಬೇಕು ಎಂದು ಕಾಂಗ್ರೆಸ್ ಸದಸ್ಯ ಅಯೂಬ್ ಖಾನ್ ಆಗ್ರಹಿಸಿದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದರ ಬಿಜೆಪಿ ಸದಸ್ಯರು ಇದು ಚರ್ಚೆಯ ವೇದಿಕೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.
ಅದರೆ, ಯತ್ನಾಳ್ ಅವರ ಹೇಳಿಕೆ ದೇಶದ ವಿಚಾರ, ಸ್ವಾತಂತ್ರ್ಯ ಹೋರಾಟಗಾರರ ವಿಚಾರವಾಗಿದ್ದು ಚರ್ಚೆಯಾಗಲೇಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.
ನಡಾವಳಿಯಂತೆ ಚರ್ಚೆ ನಡೆಸಲು ಮೇಯರ್ ತಸ್ನಿಂ ರೂಲಿಂಗ್ ಹೊರಡಿಸಿದರು.