ಉಡುಪಿ: ಮಾಜಿ ಪ್ರಧಾನಿ ದೇವೇಗೌಡರು ಪ್ರಕೃತಿ ಚಿಕಿತ್ಸೆ ಪಡೆಯಲು ಮತ್ತೆ ಕಾಪು ಬಳಿಯ ಮೂಳೂರಿನಲ್ಲಿರುವ ಸಾಯಿರಾಧಾ ರೆಸಾರ್ಟ್ಗೆ ಬಂದಿದ್ದಾರೆ.
ಗುರುವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ದೇವೇಗೌಡರು ಕಾರಿನಲ್ಲಿ ಕಾಪುವಿನ ರೆಸಾರ್ಟ್ಗೆ ಬಂದರು. ದೇವೇಗೌಡರ ಜತೆ ಪತ್ನಿ ಚನ್ನಮ್ಮ ಅವರೂ ಇದ್ದರು.
ದೇವೇಗೌಡರಿಗೆ ಮೊಣಕಾಲಿನಲ್ಲಿ ವಿಪರೀತ ನೋವಿದ್ದು ಆಯುರ್ವೇದ ತಜ್ಞರಾದ ತನ್ಮಯ ಗೋಸ್ವಾಮಿ ನೇತೃತ್ವದ ತಂಡ ಪಂಚಕರ್ಮ ಚಿಕಿತ್ಸೆ ನೀಡುತ್ತಿದೆ. ಮೇ 16ರವರೆಗೂ ಗೌಡರು ರೆಸಾರ್ಟ್ನಲ್ಲಿಯೇ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪತ್ನಿ ಚನ್ನಮ್ಮ ಅವರೂ ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ದೇವೇಗೌಡರು ಪುತ್ರ ಕುಮಾರಸ್ವಾಮಿ ಅವರ ಜತೆ ಬಂದು ಪ್ರಕೃತಿಚಿಕಿತ್ಸೆ ಪಡೆದುಕೊಂಡು ತೆರಳಿದ್ದರು.
ರೆಸಾರ್ಟ್ಗೆ ಬಿಗಿ ಭದ್ರತೆ ಒದಗಿಸಲಾಗಿದ್ದು ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.