ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಭಾನುವಾರ ರಾತ್ರಿ ಮತ್ತು ಸೋಮವಾರ ನಸುಕಿನಲ್ಲಿ ಮಳೆಯಾಗಿದೆ.
ಮಂಗಳೂರು ನಗರದಲ್ಲಿ ಮುಂಜಾನೆ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ಬೆಳಗಿನ ಜಾವ ಬಿರುಸಾಗಿ ಮಳೆ ಸುರಿದಿದೆ. ಹೆಬ್ರಿ, ಪಡುಬಿದ್ರಿ, ಹಿರಿಯಡ್ಕ, ಬ್ರಹ್ಮಾವರದಲ್ಲಿ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ಪಡುಬಿದ್ರಿಯ ಕಲ್ಸಂಕ ಸೇತುವೆ ಕಾಮಗಾರಿ ಪ್ರದೇಶದಲ್ಲಿ ಮಳೆ ನೀರು ಜಮಾವಣೆಗೊಂಡು ಕೃತಕ ನೆರೆ ಸೃಷ್ಟಿ ಯಾಗಿದೆ.
ಕೊಡಗಿನಲ್ಲಿ ಮಳೆ: ಕೊಡಗು ಜಿಲ್ಲೆಯ ಹಲವೆಡೆಸೋಮವಾರ ಬೆಳಿಗ್ಗೆ ಮಳೆಯಾಗಿದೆ.ಭಾಗಮಂಡಲ, ನಾಪೋಕ್ಲು, ತಲಕಾವೇರಿ, ಅಪ್ಪಂಗಳ ಸುತ್ತಮುತ್ತ ಮಳೆಯಾಗುತ್ತಿದೆ.ಜಿಲ್ಲೆಯ ಉಳಿದೆಡೆ ದಟ್ಟವಾದ ಮೋಡ ಕವಿದ ವಾತಾವರಣ ಇದೆ.
ಕಲಬುರ್ಗಿ ನಗರದಲ್ಲಿ ರಾತ್ರಿ ಜಿಟಿಜಿಟಿ ಮಳೆಯಾಗಿತ್ತು. ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿಯೂ ತುಂತುರು ಮಳೆಯಾಗಿದೆ.
ಬೀದರ್, ಯಾದಗಿರಿಯಲ್ಲಿಯೂ ತುಸು ಮಳೆಯಾಗಿದೆ.
ದಾವಣಗೆರೆ ನಗರದಲ್ಲಿ ರಾತ್ರಿ ಜಿಟಿ ಜಿಟಿ ಮಳೆ ಸುರಿಯಿತು. ನಿಟುವಳ್ಳಿ, ಜಯನಗರ, ಸರಸ್ವತಿನಗರ, ಕೆಟಿಜೆ ನಗರ ಮುಂತಾದ ಕಡೆಗಳಲ್ಲಿ ಮಳೆಯಾಗಿದೆ. ನಗರದಲ್ಲಿ ವರ್ಷದ ಮೊದಲ ಮಳೆ ಇದಾಗಿದ್ದು, ಬಿಸಿಲಿನ ತಾಪದಿಂದ ನಲುಗಿದ್ದ ಜನರಿಗೆ ತುಸು ನೆಮ್ಮದಿ ತಂದಿದೆ. ದುರ್ಗಾಂಬಿಕಾ ದೇವಿ ಜಾತ್ರೆಗೆ ಮಳೆಯ ಸಿಂಚನವಾಯಿತು.
ಮೈಸೂರಿನಲ್ಲಿ 3.5 ಸೆಂ.ಮೀ ಮಳೆ
ಮೈಸೂರು ನಗರದಲ್ಲಿ ನಸುಕಿನಲ್ಲಿ ಸಾಧಾರಣ ಮಳೆಯಾಗಿದೆ. ನಗರ ವ್ಯಾಪ್ತಿಯಲ್ಲಿ ಬೆಳಿಗ್ಗೆ 8 ಗಂಟೆಯವರೆಗೆ 3.5 ಸೆಂಟಿಮೀಟರ್ನಷ್ಟು ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಹದವಾದ ಮಳೆಯಾಗಿದೆ. ಇದರಿಂದ ಕಾಡ್ಗಿಚ್ಚಿನ ಆತಂಕ ಕಡಿಮೆಯಾಗಿದೆ. ಯುಗಾದಿ ಮುನ್ನವೇ ಸುರಿದಿರುವ ಮಳೆಯು ರೈತರಲ್ಲಿ ಸಂತಸ ತರಿಸಿದೆ.
2 ಕಡೆ ಉರುಳಿದ ಮರ: ಮೈಸೂರಿನಲ್ಲಿ 2 ಕಡೆ ಸಣ್ಣ ಮರಗಳು ಉರುಳಿ ಬಿದ್ದಿವೆ. ವಿದ್ಯಾರಣ್ಯಪುರಂನ ಬೂತಾಳೆ ಪಿಚ್ ಸಮೀಪ ಹೊಂಗೆಮರ ಹಾಗೂ ಕುವೆಂಪುನಗರದ ಪೊಲೀಸ್ ಠಾಣೆ ಮುಂಭಾಗ ಮರಗಳು ಬಿದ್ದಿವೆ. ಪಾಲಿಕೆ ರಕ್ಷಣಾ ತಂಡವಾದ ಅಭಯ್ 1 ರ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.