ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರತ್‌ ಬಚ್ಚೇಗೌಡ ಬಗ್ಗೆ ಏನೂ ಹೇಳಲ್ಲ: ಶೋಭಾ ಕರಂದ್ಲಾಜೆ

Last Updated 9 ಡಿಸೆಂಬರ್ 2019, 8:52 IST
ಅಕ್ಷರ ಗಾತ್ರ

ನವದೆಹಲಿ: ಹೊಸಕೋಟೆ ಕ್ಷೇತ್ರದಲ್ಲಿ ನಮ್ಮದೇ ಪಕ್ಷದ ಕಾರ್ಯಕರ್ತ ಶರತ್ ಬಚ್ಚೇಗೌಡ ಅವರು ಅಧಿಕೃತ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಜಯಗಳಿಸಿದ್ದಾರೆ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಕರ್ನಾಟಕ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ದಾಖಲಿಸಿದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,, ಬಚ್ಚೇಗೌಡರು ಸಂಸತ್ ಸದಸ್ಯರಾಗಿದ್ದಾರೆ. ಅವರ ನಡೆಯನ್ನು ಕೇಂದ್ರ ಸಮಿತಿ ನಾಯಕರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಇದು ರಾಜ್ಯದ ಜನರ ಗೆಲುವು. ರಾಜ್ಯದಲ್ಲಿ ಈ ಹಿಂದೆ ಅಸ್ಥಿರ ಸರ್ಕಾರ ಇತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರು. ಮೂರು ತಿಂಗಳಿನಿಂದ ನಮ್ಮ ಸರ್ಕಾರ ಇದೆ. ನಮ್ಮ ಆಡಳಿತವನ್ನು ಜನರು ಮೆಚ್ಚಿದ್ದಾರೆ ಎನ್ನುವುದಕ್ಕೆ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ವಿಶ್ಲೇಷಿಸಿದರು.

ಉಳಿದ ಅವಧಿಗೆ ಸ್ತಿರ ಸರ್ಕಾರ ನೀಡಿ ಎಂದು ಜನರು ಸೂಚಿಸಿದ್ದಾರೆ. ಜನರ ಇಚ್ಛೆಯನ್ನು ನಾವು ಪೂರ್ಣಗೊಳಿಸುತ್ತೇವೆ. ಮಂಡ್ಯದಲ್ಲಿ ಗೆಲುವು ಸಾಧಿಸಿದ್ದು ನನಗೆ ಖುಷಿಕೊಟ್ಟಿದೆ. ನಾರಾಯಣಗೌಡರಿಗೆ ಕೆ.ಆರ್.ಪೇಟೆಯಲ್ಲಿ ಅವರದೇ ಆದ ಶಕ್ತಿಯಿದೆ. ನಾಮಪತ್ರ ಸಲ್ಲಿಕೆ ದಿವನೇ ಅವರ ಮೇಲೆ ಚಪ್ಪಲಿ ತೂರಾಟ ನಡೆಯಿತು. ಜನರು ಈ ಅವಮಾನ ಸಹಿಸಲಿಲ್ಲ. ಅವರನ್ನು ಗೆಲ್ಲಿಸಿದರು ಎಂದು ಅಭಿಪ್ರಾಯಪಟ್ಟರು.

ಸ್ಪೀಕರ್ ರಮೇಶ್‌ ಕುಮಾರ್ ಅವರ ಆದೇಶವನ್ನು ಮಾತ್ರವಲ್ಲ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳನ್ನೂ ಜನರು ಅನರ್ಹಗೊಳಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ವ್ಯಂಗ್ಯವೇ ಅವರನ್ನು ಸೋಲಿಸಿದೆ. ಅವರ ಆರೋಪಗಳಿಗೆ ತಕ್ಕ ಪ್ರತ್ಯುತ್ತರ ಸಿಕ್ಕಿದೆ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT