ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಬಲಿ: ಗೌಡರ ನೀಚ ಗುಣ- ಸಿದ್ದರಾಮಯ್ಯ

‘ಬಿಜೆಪಿ ಮೆಚ್ಚಿಸುವ ಹೇಳಿಕೆ; ಕಾಂಗ್ರೆಸ್ ಮುಗಿಸಲು ದೇವೇಗೌಡರ ಸಂಚು’
Last Updated 23 ಆಗಸ್ಟ್ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖಂಡ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಸಿಡಿದೆದ್ದಿದ್ದು, ‘ಸರ್ಕಾರ ಬೀಳಿಸುವುದು ಗೌಡರ ನೀಚ ಗುಣ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ’ ಎಂದು ದೇವೇಗೌಡ ಆರೋಪಕ್ಕೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಿಟ್ಟಿನಿಂದಲೇ ವಿವರಣೆ ನೀಡಿದರು. ‘ನನ್ನ ವಿರುದ್ಧ ಇನ್ನೂ ಸೇಡಿನ ರಾಜಕಾರಣ ಮುಂದುವರಿಸಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಸರ್ಕಾರ ಬೀಳಿಸುವಂತಹ ನೀಚ ರಾಜಕಾರಣ ಮಾಡಿಲ್ಲ. ಅದು ದೇವೇಗೌಡ ಹಾಗೂ ಅವರ ಮಕ್ಕಳ ಹುಟ್ಟುಗುಣ. ಗೌಡರು ಸರ್ಕಾರ ಉರುಳಿಸುವುದರಲ್ಲಿ ನಿಪುಣರು. ಎಸ್.ಆರ್.ಬೊಮ್ಮಾಯಿ ಅವರಿಂದ ಹಿಡಿದು ಸಾಕಷ್ಟು ಸರ್ಕಾರಗಳನ್ನು ಕೆಡವಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಮಕ್ಕಳು, ಕುಟುಂಬದವರನ್ನು ಬಿಟ್ಟು ಬೇರೆ ಯಾರನ್ನೂ ಬೆಳೆಸಿಲ್ಲ. ಸ್ವಜಾತಿಯವರನ್ನೂ ಮುಂದೆ ತರಲಿಲ್ಲ. ಆದರೆ ನನ್ನನ್ನು ಲಿಂಗಾಯತ, ಒಕ್ಕಲಿಗ ವಿರೋಧಿ ಎಂದು ಬಿಂಬಿಸುತ್ತಾರೆ’ ಎಂದು ಕಿಡಿಕಾರಿದರು.

‘ನನ್ನ ವಿರುದ್ಧ ಆರೋಪ ಮಾಡಿ, ಬಿಜೆಪಿಯವರನ್ನು ಖುಷಿಪಡಿಸಲು ಹೊರಟಿದ್ದಾರೆ. ನನ್ನ ರಾಜಕೀಯ ಇತಿಹಾಸ, ಗೌಡರ ರಾಜಕೀಯ ಇತಿಹಾಸವನ್ನೂ ಜನರು ನೋಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಎದುರಾಳಿಯಾಗಿದ್ದು, ಪಕ್ಷ ಮುಗಿಸುವ ಸಲುವಾಗಿ ದುರುದ್ದೇಶದಿಂದ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಎಲ್ಲ ಆರೋಪಗಳೂ ಶುದ್ಧ ಸುಳ್ಳು’ ಎಂದು ತರಾಟೆಗೆ ತೆಗೆದುಕೊಂಡರು.

‘ಮೈತ್ರಿ ಸರ್ಕಾರ ಪತನವಾಗಲು ಕುಮಾರಸ್ವಾಮಿ, ರೇವಣ್ಣ, ದೇವೇಗೌಡ ಕಾರಣ ಎಂದು ಶಾಸಕರು, ಅಂದಿನ ಕೆಲ ಸಚಿವರು ಹೇಳಿದ್ದರು. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಕ್ಷೇತ್ರಗಳ ಅಭಿವೃದ್ಧಿ ಕೆಲಸ ಮಾಡಿಕೊಟ್ಟಿದ್ದರೆ ಅತೃಪ್ತಿ ತಲೆದೋರುತ್ತಿರಲಿಲ್ಲ. ಏಕಪಕ್ಷೀಯ ನಿರ್ಧಾರದಿಂದ ಸರ್ಕಾರ ಬಿತ್ತು’ ಎಂದು ಸ್ಪಷ್ಟಪಡಿಸಿದರು.

‘ನಾನು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದರೂ ಸಮಿತಿಯಲ್ಲಿ ತೆಗೆದುಕೊಂಡ ಯಾವ ತೀರ್ಮಾನವನ್ನೂ ಜಾರಿ ಮಾಡಲಿಲ್ಲ. ನಿರ್ಧಾರ ಕೈಗೊಂಡಾಗ ಆಯಿತು ಎಂದು ಹೇಳುತ್ತಿದ್ದ ಕುಮಾರಸ್ವಾಮಿ, ನಂತರ ಕಾರ್ಯರೂಪಕ್ಕೆ ತರುತ್ತಿರಲಿಲ್ಲ. ಇಂತಹ ನಡವಳಿಕೆ, ಆಡಳಿತ ವೈಖರಿಯಿಂದ ಸರ್ಕಾರ ಪತನಗೊಂಡಿದೆ’ ಎಂದು ವಿವರಣೆ ನೀಡಿದರು.

‘ವಿರೋಧ ಪಕ್ಷದ ನಾಯಕನಾಗುವ ಸಲುವಾಗಿ ಸರ್ಕಾರ ಬೀಳಿಸಿದ್ದಾರೆ ಎಂದು ಗೌಡರು ಹೇಳುತ್ತಿದ್ದಾರೆ. ನಮ್ಮ ಪಕ್ಷವೂ ಸರ್ಕಾರದಲ್ಲಿ ಭಾಗಿಯಾಗಿತ್ತು. ಮುಖ್ಯಮಂತ್ರಿಯಾಗಲು ಅಥವಾ ಅಧಿಕಾರಕ್ಕಾಗಿ ಯಾವುದಾದರೂ ಸರ್ಕಾರ ಬೀಳಿಸುವುದನ್ನು ನೋಡಿದ್ದೇವೆ. ಯಾರಾದರೂ ಸರ್ಕಾರ ಬೀಳಿಸಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆಯೆ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ವೈಯಕ್ತಿಕ ದ್ವೇಷವಿಲ್ಲ. ನನ್ನನ್ನು ಕೇಳಿ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಕೊಟ್ಟಿಲ್ಲ. ಅವರ ಹೈಕಮಾಂಡ್ ಆದೇಶದಂತೆ ನಿರ್ಧಾರ ಕೈಗೊಂಡಿದ್ದಾರೆ’ ಎಂದರು.

ಮೈತ್ರಿಗೆ ತೆರೆ: ಕಾಂಗ್ರೆಸ್‌, ಜೆಡಿಎಸ್‌ ವಾಕ್‌ಸಮರ ತಾರಕಕ್ಕೇರಿದ್ದು, ಮೈತ್ರಿ ಬಹುತೇಕ ಅಂತ್ಯಗೊಂಡಿದೆ.

‘ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ’
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಲು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.

ಕಳೆದ ಮೂರ‍್ನಾಲ್ಕು ದಿನಗಳಿಂದ ಗೌಡರು ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದ ಸಿದ್ದರಾಮಯ್ಯ, ತಮ್ಮ ಬೆಂಬಲಿಗ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದರು. ಇದು ಸರ್ಕಾರದ ಪತನಕ್ಕೆ ಕಾರಣವಾಯಿತು’ ಎಂದುಕಾರ್ಯಕರ್ತರ ಸಭೆ ಹಾಗೂ ಮಾಧ್ಯಮದವರ ಎದುರು ಆರೋಪಿಸಿದ್ದರು.

ಕಣ್ಣೀರು ತರಿಸಿಲ್ಲ: ದಿನೇಶ್‌
ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಕಣ್ಣಲ್ಲಿ ನೀರು ತರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

‘ಸಿದ್ದರಾಮಯ್ಯ ವಿರುದ್ಧ ನೀಡುತ್ತಿರುವ ವೈಯಕ್ತಿಕ ಹೇಳಿಕೆ ಹಾಗೂ ಕೆಸರು ಎರಚಾಟವನ್ನು ಇಲ್ಲಿಗೆ ನಿಲ್ಲಿಸಬೇಕು. ದೇವೇಗೌಡ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ ಅಷ್ಟೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಅಧಿಕಾರದಲ್ಲಿ ಇದ್ದವರು ಕಣ್ಣೀರು ಹಾಕಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುವುದು ನಾಟಕೀಯ ಎನಿಸುತ್ತದೆ. ಇಂಥ ಹೇಳಿಕೆಯ ಉದ್ದೇಶ ಏನೆಂಬುದು ಗೊತ್ತಿಲ್ಲ. ಮೈತ್ರಿ ಸರ್ಕಾರಕ್ಕೆ ಪಕ್ಷ ಎಲ್ಲ ರೀತಿಯ ಸಹಕಾರ ನೀಡಿದ್ದು, ಕೊನೆಯಲ್ಲಿ ಸರ್ಕಾರ ಉಳಿಸಲೂ ಮುಖಂಡರು ಪ್ರಯತ್ನ ನಡೆಸಿದರು. ನಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ’ ಎಂದು ಹೇಳಿದರು.

ಮೈತ್ರಿ ಸರ್ಕಾರ ಬೀಳಲು ದೇವೇಗೌಡ, ಕುಮಾರಸ್ವಾಮಿ ಅವರೇ ಕಾರಣ. ಇದರಲ್ಲಿ ಸಿದ್ದರಾಮಯ್ಯ ಪಾತ್ರವಿಲ್ಲ.ಕಿರುಕುಳ ನೀಡಿದ್ದಾರೆ ಎಂಬುದನ್ನು ಸಾಬೀತು ಮಾಡಲಿ. ಅನಗತ್ಯವಾಗಿ ಯಾರ ಮೇಲೂ ಸುಳ್ಳು ಆರೋಪ ಮಾಡಬಾರದುಎಂದು ಶಾಸಕ ಜಮೀರ್ ಅಹಮದ್, ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

‘ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ’
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಲು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.

ಕಳೆದ ಮೂರ‍್ನಾಲ್ಕು ದಿನಗಳಿಂದ ಗೌಡರು ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದ ಸಿದ್ದರಾಮಯ್ಯ, ತಮ್ಮ ಬೆಂಬಲಿಗ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದರು. ಇದು ಸರ್ಕಾರದ ಪತನಕ್ಕೆ ಕಾರಣವಾಯಿತು’ ಎಂದುಕಾರ್ಯಕರ್ತರ ಸಭೆ ಹಾಗೂ ಮಾಧ್ಯಮದವರ ಎದುರು ಆರೋಪಿಸಿದ್ದರು.

‘ಕತ್ತಿ ಕರೆ ನಿಜ’
‘ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಬಿಜೆಪಿ ಶಾಸಕ ಉಮೇಶ್ ಕತ್ತಿ ದೂರವಾಣಿ ಕರೆ ಮಾಡಿದ್ದು ನಿಜ. ನನ್ನ ಕಣ್ಣಿನ ಆರೋಗ್ಯ ವಿಚಾರಿಸಲು ಕರೆ ಮಾಡಿದ್ದರು. ಉಳಿದಂತೆ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ಪಕ್ಷಕ್ಕೆ ಬರುವಂತೆ ಆಹ್ವಾನವನ್ನೂ ನೀಡಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ಲೋಕಾಭಿರಾಮ ಚರ್ಚೆ ನಡೆದಿದೆ’ ಎಂದು ಪರೋಕ್ಷವಾಗಿ ರಾಜಕೀಯ ಚರ್ಚೆ ನಡೆದಿರುವುದನ್ನು ಒಪ್ಪಿಕೊಂಡರು.

*
ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ಉತ್ತರಿಸಲು ಇದು ಸಕಾಲವಲ್ಲ. ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಾದ ಸಂದರ್ಭದಲ್ಲಿ ಒಡಕಿನ ಮಾತುಗಳು ಆರೋಗ್ಯಕರವಲ್ಲ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT