ತುಮಕೂರು: ಟಿಕ್–ಟಾಕ್ ಮಾಡಲು ಹೋಗಿ ಬೆನ್ನುಹುರಿ (ಸ್ಪೈನಲ್ ಕಾರ್ಡ್) ಮುರಿದುಕೊಂಡಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದ ಕುಮಾರ್ (23) ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟರು.
ಕುಮಾರ್ ಆರ್ಕೆಸ್ಟ್ರಾದಲ್ಲಿ ಗಾಯಕ ಹಾಗೂ ನೃತ್ಯಪಟುವಾಗಿದ್ದರು. ಅಲ್ಲದೆ ಕೆಲವು ಶಾಲೆಗಳ ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದರು. ಜೂನ್ 15 ರಂದು ಗ್ರಾಮದ ಶಾಲಾ ಮೈದಾನದಲ್ಲಿ ಸ್ನೇಹಿತರ ಜೊತೆ ಟಿಕ್–ಟಾಕ್ ಮಾಡುತ್ತಿದ್ದರು. ಈ ವೇಳೆ ಹಿಮ್ಮುಖವಾಗಿ ಪಲ್ಟಿ ಹೊಡೆದಾಗ ಕುತ್ತಿಗೆ ನೆಲಕ್ಕೆ ಬಡಿದಿತ್ತು. ಆ ರಭಸಕ್ಕೆ ಬೆನ್ನುಹುರಿ ಪೂರ್ಣವಾಗಿ ಮುರಿದಿತ್ತು.
ಬಡ ಕುಟುಂಬದ ಕುಮಾರ್, ತಂದೆ–ತಾಯಿಗೆ ಒಬ್ಬನೇ ಮಗನಾಗಿದ್ದರು. ತಂದೆ ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆರ್ಕೆಸ್ಟ್ರಾಗಳಲ್ಲಿನ ದುಡಿಮೆಯೇ ಕುಟುಂಬ ನಿರ್ವಹಣೆಗೆ ಮೂಲವಾಗಿತ್ತು. ಇವರು ಚೇತರಿಸಿಕೊಳ್ಳುವ ಕುರಿತು ವೈದ್ಯರು ಸ್ಪಷ್ಟವಾದ ಭರವಸೆ ನೀಡಿರಲಿಲ್ಲ.
‘ಕುಮಾರ್ ದುಡಿಮೆಯಿಂದಲೇ ಕುಟುಂಬದ ಬದುಕು ಸಾಗುತ್ತಿತ್ತು. ಅವನಿಗೆ ನೃತ್ಯಶಾಲೆ ಆರಂಭಿಸುವ ಆಸೆಯೂ ಇತ್ತು. ಈಗ ಎಲ್ಲವೂ ಮಣ್ಣು ಪಾಲಾಗಿದೆ’ ಎಂದು ಕುಮಾರ್ ಚಿಕ್ಕಮ್ಮ ನಾಗವೇಣಿ ಕಣ್ಣೀರಿಟ್ಟರು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭೆ ಹೊರಹಾಕಿದರೆ ಮತ್ತಷ್ಟು ಅವಕಾಶ ದೊರೆಯುತ್ತದೆ ಎನ್ನುವ ಆಸೆಯಿಂದ ಕುಮಾರ್ ಟಿಕ್–ಟಾಕ್ ಮಾಡಲು ಮುಂದಾಗಿದ್ದರು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.