ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊದಿಂದ ಮಾನವ ಬಾಹ್ಯಾಕಾಶ ಕೇಂದ್ರ ಆರಂಭ, ಏಪ್ರಿಲ್‌ನಲ್ಲಿ ಚಂದ್ರಯಾನ–2

ನೌಕೆ ಉಡಾವಣೆಗೆ ಸಿದ್ಧತೆ
Last Updated 11 ಜನವರಿ 2019, 9:30 IST
ಅಕ್ಷರ ಗಾತ್ರ

ಬೆಂಗಳೂರು: ಗಗನಯಾನ ಸೇರಿದಂತೆ ಭವಿಷ್ಯದ ಎಲ್ಲ ಮಾನವ ಸಹಿತ ಬಾಹ್ಯಾಕಾಶ ಯಾನಗಳಿಗಾಗಿ ಇಸ್ರೊ ಪ್ರತ್ಯೇಕ ‘ಮಾನವ ಬಾಹ್ಯಾಕಾಶ ಕೇಂದ್ರ’ವನ್ನು ಸ್ಥಾಪಿಸಿದೆ.

ಇಸ್ರೊ ಅಧ್ಯಕ್ಷ ಕೆ.ಶಿವನ್‌ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

ಗಗನಯಾನಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದರಿಂದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ಚಟುವಟಿಕೆಗಳ ವ್ಯಾಪ್ತಿಯನ್ನು ಇನಷ್ಟು ವಿಸ್ತರಿಸಲು ಸಹಾಯಕವಾಗಿದೆ. ಭವಿಷ್ಯದ ಎಲ್ಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಈ ಕೇಂದ್ರವೇ ಉಸ್ತುವಾರಿ ವಹಿಸಲಿದೆ ಎಂದರು.

ಈ ಕೇಂದ್ರಕ್ಕೆ ಡಾ.ಉನ್ನಿಕೃಷ್ಣ ನಾಯರ್‌ ನಿರ್ದೇಶಕರಾಗಿರುತ್ತಾರೆ. ಗಗನ ಯಾನ ಯೋಜನೆ ಯೋಜನಾ ನಿರ್ದೇಶಕರನ್ನಾಗಿ ಹಟ್ಟನ್‌ ಅವರನ್ನು ನೇಮಿಸಲಾಗಿದೆ ಎಂದರು.

ಗಗನಯಾನ ರಾಕೆಟ್‌ ಉಡಾವಣೆ 2021ರ ಡಿಸೆಂಬರ್‌ ಆಗಲಿದೆ. ಅದಕ್ಕೆ ಪೂರ್ವಭಾವಿಯಾಗಿ 2020ರ ಡಿಸೆಂಬರ್‌ನಲ್ಲಿ ಮತ್ತು 2021ರ ಜುಲೈನಲ್ಲಿ ಪರೀಕ್ಷಾರ್ಥವಾಗಿ ಮಾನವರಹಿತವಾಗಿ ಪರೀಕ್ಷೆ ಕೈಗೊಳ್ಳಲಾಗುವುದು ಎಂದು ಹೇಳಿದರು.

ಏಪ್ರಿಲ್‌ನಲ್ಲಿ ಚಂದ್ರಯಾನ–2

ಬರುವ ಏಪ್ರಿಲ್‌ನಲ್ಲಿ ಚಂದ್ರಯಾನ–2 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗುವುದು. ಈ ಮೊದಲು ಮಾರ್ಚ್‌ನಲ್ಲಿ ಉಡಾವಣೆಯ ಉದ್ದೇಶವಿತ್ತು. ಇನ್ನೂ ಸಣ್ಣಪುಟ್ಟ ಅಂಶಗಳ ಬಗ್ಗೆ ಗಮನಹರಿಸಬೇಕಾಗಿದೆ. ಆದ್ದರಿಂದ, ಬಹುತೇಕ ಏಪ್ರಿಲ್‌ನಲ್ಲಿ ಉಡಾವಣೆ ಆಗಲಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಇಳಿಸಲಾಗುವುದು. ಯಾವುದೇ ದೇಶ ಚಂದ್ರದ ಈ ಪ್ರದೇಶದತ್ತ ಗಮನಹರಿಸಿಲ್ಲ. ನಾವು ಇತಿಹಾಸ ಸೃಷ್ಟಿಸುವುದು ಖಚಿತ ಎಂದು ಹೇಳಿದ ಅವರು, ಲೋಕಸಭಾ ಚುನಾವಣೆಗೂ ಏಪ್ರಿಲ್‌ನಲ್ಲಿ ಚಂದ್ರಯಾನ–2ನೌಕೆಯ ಉಡಾವಣೆಗೂ ಸಂಬಂಧವಿಲ್ಲ. ನಮ್ಮ ಮೇಲೆ ಯಾರೂ ಯಾವುದೇ ರೀತಿಯ ಒತ್ತಡವನ್ನು ಹಾಕಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT