ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್‌ಗೆ ಸೂಚಿಸಿದ್ದೇಕೆ?: ಸರ್ಕಾರದ ಸ್ಪಷ್ಟನೆ ಹೀಗಿದೆ

Last Updated 25 ಏಪ್ರಿಲ್ 2021, 13:01 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್‌–19 ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಿ ಪ್ರಚೋದನಾತ್ಮಕ ಸಂದೇಶವನ್ನು ಪ್ರಕಟಿಸಿದ್ದ ಸುಮಾರು 100ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ತೆಗೆದು ಹಾಕಿರುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ.

ಕೇಂದ್ರ ಸರ್ಕಾರದ ವಿರುದ್ಧ ಪ್ರಚೋದನಾತ್ಮಕ ಸಂದೇಶ ಹಾಗೂ ಪ್ರಸ್ತುತ ಸನ್ನಿವೇಶಕ್ಕೆ ಸಂಬಂಧವಿಲ್ಲದ, ಹಳೆಯ ಚಿತ್ರಗಳು ಮತ್ತು ದೃಶ್ಯಗಳು, ಕೋವಿಡ್‌ ನಿಯಮಾವಳಿಗಳ ಬಗ್ಗೆ ತಪ್ಪು ಮಾಹಿತಿ ಹಂಚಿಕೊಳ್ಳುವಂತಹ ಪೋಸ್ಟ್‌ಗಳನ್ನು ಅಳಿಸಿ ಹಾಕುವಂತೆ ಟ್ವಿಟರ್‌, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ಗೆ ಮನವಿ ಮಾಡಲಾಗಿತ್ತು.

ಭಾರತದಲ್ಲಿ ಕೋವಿಡ್‌–19 ಹೆಚ್ಚಳ ಮತ್ತು ಕುಂಭ ಮೇಳದ ಕುರಿತು ಟ್ವೀಟ್‌ಗಳಲ್ಲಿ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಮನವಿ ಮೇರೆಗೆ ಸಾಮಾಜಿಕ ಮಾಧ್ಯಮವು ಟ್ವೀಟ್‌ಗಳನ್ನು ಅಳಿಸಿ ಹಾಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶದ ಅನ್ವಯ ಟ್ವಿಟರ್ ಈಗಾಗಲೇ 50 ಟ್ವೀಟ್‌ಗಳನ್ನು ತೆಗೆದು ಹಾಕಿದೆ. ಉಳಿದಂತೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗಳನ್ನು ತೆಗೆದು ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ಕಾಂಗ್ರೆಸ್‌ ಸಂಸದ ರೇವಂತ್‌ ರೆಡ್ಡಿ ಹಾಗೂ ಪಶ್ಚಿಮ ಬಂಗಾಳದ ಸಚಿವ ಮಲಯ್‌ ಘಟಕ್‌ ಸೇರಿದಂತೆ ಹಲವು ಜನರ ಟ್ವೀಟ್‌ಗಳನ್ನು ತೆಗೆದು ಹಾಕಲಾಗಿದೆ. ಬಹುತೇಕ ಟ್ವೀಟ್‌ಗಳಲ್ಲಿ ಎನ್‌ಡಿಎ ಸರ್ಕಾರದ ಕ್ರಮಗಳನ್ನು ಟೀಕಿಸಲಾಗಿತ್ತು.

ಪ್ರಶ್ನಾರ್ಹವಾದ ಪೋಸ್ಟ್‌ಗಳಲ್ಲಿ ಕೋವಿಡ್‌ ಮೃತದೇಹಗಳಿಗೆ ಬೆಂಕಿಯಿಡುವ, ಶವಸಂಸ್ಕಾರದ ಚಿತ್ರಗಳನ್ನು ತೋರಿಸಲಾಗಿತ್ತು. ಸಾರ್ವಜನಿಕರನ್ನು ಪ್ರಚೋದಿಸುವ ಮತ್ತು ಆರೋಗ್ಯ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಕಾರಣವಾಗುವ ಪ್ರಚೋದನಾತ್ಮಕ ಸಂದೇಶಗಳಿದ್ದವು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT