ಡಾ.ಗಂಗೂಬಾಯಿ ಹಾನಗಲ್ ಅವರು ತಮ್ಮ ಮಗಳು, ವಿದುಷಿ ಕೃಷ್ಣಾ ಹಾನಗಲ್ ಮೃತಪಟ್ಟ ನಂತರ ಹಾಡುವುದನ್ನೇ ನಿಲ್ಲಿಸಿದ್ದರು. ಸಹಗಾಯಕಿಯಾಗಿ 50 ವರ್ಷ ಜೊತೆಯಲ್ಲಿ ಹಾಡಿದ್ದ ಮಗಳ ಸಾವನ್ನು ಸಹಿಸಲು ಗಂಗಜ್ಜಿಗೆ ಸಾಧ್ಯವಾಗಲಿಲ್ಲ. 2 ವರ್ಷ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ. 2006ರಲ್ಲಿ ಖ್ಯಾತ ತಬಲಾವಾದಕ ಪಂಡಿತ್ ರವೀಂದ್ರ ಯಾವಗಲ್ ಅವರ ಪ್ರೀತಿಯ ಕರೆಗೆ ಮಣಿದು‘ರಾಮಕಲಾ ವೇದಿಕೆ’ ಉದ್ಘಾಟನಾ ಸಮಾರಂಭದಲ್ಲಿ ಗಂಗಜ್ಜಿ ಅತಿಥಿಯಾಗಿ ಭಾಗವಹಿಸಿದ್ದರು. ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲುವಾದನ ಕಛೇರಿ ನಿಗದಿಯಾಗಿತ್ತು. ಚೌರಾಸಿಯಾ ಅವರ ಕರೆಗೆ ಓಗೊಟ್ಟು ಆ ಕಾರ್ಯಕ್ರಮದಲ್ಲಿ ಗಂಗಜ್ಜಿ ದುರ್ಗಾ ರಾಗದಲ್ಲಿ ನಾದಸುಧೆ ಹರಿಸಿದರು. ಗಂಗಜ್ಜಿ ನಾದಕ್ಕೆ ಹರಿಪ್ರಸಾದ್ ಚೌರಾಸಿಯಾ ಕೊಳಲಿನ ನಿನಾದ ಆನಂದದ ಹೊನಲು ಸೃಷ್ಟಿಸಿತು. ಕಿಕ್ಕಿರಿದು ತುಂಬಿದ್ದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾವುಕ ಸನ್ನಿವೇಶ ನಿರ್ಮಾಣವಾಗಿತ್ತು. ಮಗಳು ಮೃತಪಟ್ಟ 2 ವರ್ಷದ ನಂತರ ಗಂಗಜ್ಜಿ ಮತ್ತೆ ಹಾಡಿದರು. ‘ಮತ್ತೆ ಹಾಡಿತು ಕೋಗಿಲೆ’ ಎಂಬ ಭಾವ ಸೃಷ್ಟಿಯಾಯಿತು. ಆ ಗಾಯನ ಕೇಳಿದ ಪ್ರತಿಯೊಬ್ಬ ಸಂಗೀತ ಪ್ರೇಮಿಯ ಕಣ್ಣಾಲಿಗಳು ತುಂಬಿಬಂದಿದ್ದವು. ಆ ಘಟನೆ ಇಂದಿಗೂ ಐತಿಹಾಸಿಕ ದಾಖಲೆಯಾಗಿ ಉಳಿದಿದೆ.