ಕಾರವಾರದ ಬೀದಿಯಲ್ಲಿ ನಡೆದು ಬಂತು ದೊಡ್ಡ ಮೊಸಳೆ, ಗ್ರಾಮಸ್ಥರ ಎದೆಯಲ್ಲಿ ನಡುಕದ ಕಹಳೆ!
ಹೌದು, ನಿತ್ಯವೂ ಬೀದಿಯಲ್ಲಿ ದನ, ಕರು, ಕುರಿ ಮೇಕೆಗಳನ್ನೇ ನೋಡುತ್ತಿದ್ದ ಜನರೆಲ್ಲ ಮೊಸಳೆ ಕಂಡು ಬೆಚ್ಚಿ ಬಿದ್ದಿದ್ದಾರೆ. ಸಲೀಸಾಗಿ ಹೆಜ್ಜೆ ಮೇಲೆ ಹೆಜ್ಜೆಯಿಡುತ್ತ ವಾಕಿಂಗ್ ಬಂದ ಮೊಸಳೆ ಯಾರ ಮನೆಯೊಳಗೆ ನುಗ್ಗುತ್ತದೋ ಎಂಬ ಭಯದಲ್ಲೇ ಬಿಟ್ಟಕಣ್ಣು ಬಿಟ್ಟಂತೆ ನೋಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದಾಂಡೇಲಿಯ ಕೋಗಿಲಬನ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಕಾಳಿ ನದಿಯಿಂದ ಮೇಲೆ ಬಂದಿದ್ದ ಮೊಸಳೆಯು, ರಸ್ತೆಯುದ್ದಕ್ಕೂ ಸಂಚರಿ, ಭಯದ ಸಂಚಲನ ಸೃಷ್ಟಿಸಿತ್ತು. ಆದರೆ, ಯಾವುದೇ ಸಾಕುಪ್ರಾಣಿಗಳಿಗೆ ತೊಂದರೆ ನೀಡದೆ ತನ್ನ ಪಾಡಿಗೆ ತಾನು ನಡೆದು ಹೋಗಿದೆ.
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೊಸಳೆಯನ್ನು ಪುನಃ ನದಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಾಳಿ ನದಿಯಲ್ಲಿ ಸಾಕಷ್ಟು ಮೊಸಳೆಗಳಿದ್ದು, ದಾಂಡೇಲಿಯಲ್ಲಿ ಮೊಸಳೆ ಪಾರ್ಕ್ ಕೂಡ ಇದೆ.