ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ರಾಜ್ಯ ಸರ್ಕಾರ ಇತ್ತೀಚೆಗೆ ವರ್ಗಾವಣೆ ಮಾಡಿತ್ತು. ಈ ಬಗ್ಗೆ ಮಾತನಾಡಿದ್ದ ರೋಹಿಣಿ ಸಿಂಧೂರಿ, ಭೂ ಮಾಫಿಯಾದಲ್ಲಿ ಭಾಗಿಯಾಗಿರುವವರೆಲ್ಲಾ ಸೇರಿ ತಮ್ಮನ್ನು ಮೈಸೂರಿನಿಂದ ವರ್ಗಾವಣೆ ಮಾಡಿಸಿದರು ಎಂದು ಕಿಡಿ ಕಾರಿದ್ದರು.
ಮಾತ್ರವಲ್ಲದೆ, ‘ಶಾಸಕ ಸಾ.ರಾ.ಮಹೇಶ್ ಅವರು ಮೈಸೂರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಮಾಫಿಯಾದಲ್ಲಿ ತೊಡಗಿದ್ದಾರೆ. ನಗರದ ದಟ್ಟಗಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಸಾ.ರಾ.ಚೌಲ್ಟ್ರಿ (ಕಲ್ಯಾಣ ಮಂಟಪ) ನಿರ್ಮಿಸಲಾಗಿದೆ’ ಎಂದು ನೇರ ಆರೋಪ ಮಾಡಿದ್ದರು.
ಸಿಂಧೂರಿ ಹೇಳಿಕೆ ವಿರೋಧಿಸಿ ಸಾ.ರಾ.ಮಹೇಶ್ ಅವರು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ.