ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 1 ಲಕ್ಷಕ್ಕೂ ಅಧಿಕ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.
ಉಕ್ರೇನ್ನ ಬಂದರು ನಗರವಾದ ಮರಿಯುಪೋಲ್ ಆಸ್ಪತ್ರೆ ಮೇಲೆ ಶುಕ್ರವಾರ ನಡೆದ ವಾಯುದಾಳಿಯಲ್ಲಿ ಮಗು ಸೇರಿದಂತೆ ಮೂವರು ಬಲಿಯಾಗಿದ್ದು, 17 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಮಾನವೀಯ ಕಾರಿಡಾರ್ ಅನ್ನು ಗುರಿಯಾಗಿಸಿಕೊಂಡುರಷ್ಯಾ ದಾಳಿ ನಡೆಸಿದ್ದು, ಇದು ‘ಸಂಪೂರ್ಣ ಭಯೋತ್ಪಾದನೆ’ ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ನಾಗರಿಕ ಪ್ರದೇಶಗಳು ಹಾಗೂ ಆಸ್ಪತ್ರೆಗಳ ಮೇಲೆ ದಾಳಿ ನಡೆಸುತ್ತಿಲ್ಲ ಎಂದು ರಷ್ಯಾ ಹೇಳಿಕೊಂಡಿತ್ತು. ಆದರೆ, ಇದರ ಬೆನ್ನಲ್ಲೇ ದಾಳಿ ನಡೆಸಿರುವುದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಮರಿಯುಪೋಲ್ ಪ್ರದೇಶದಲ್ಲಿ ಸ್ಥಳೀಯರು ಆಹಾರ ಪದಾರ್ಥಗಳು, ಇಂಧನಕ್ಕಾಗಿ ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ.
ರಷ್ಯಾ ಬುಧವಾರ ಉಕ್ರೇನ್ನಲ್ಲಿ ಕದನ ವಿರಾಮ ಘೋಷಿಸಿತ್ತು. ನಾಗರಿಕರ ಸ್ಥಳಾಂತರಕ್ಕೆ ನೆರವಾಗಲು ಮಾನವೀಯ ಕಾರಿಡಾರ್ ತೆರೆಯುವುದಾಗಿ ಪ್ರಕಟಿಸಿದೆ. ಸುಮಿ, ಹಾರ್ಕಿವ್, ಮರಿಯುಪೋಲ್ ಸೇರಿದಂತೆ ಕೆಲವು ನಗರಗಳಿಂದ ಮಾನವೀಯ ಕಾರಿಡಾರ್ ವ್ಯವಸ್ಥೆ ಕಲ್ಪಿಸುವುದಾಗಿ ರಷ್ಯಾ ಹೇಳಿತ್ತು.