ವಾಷಿಂಗ್ಟನ್: ಕೋವಿಡ್–19 ಪ್ರಕರಣಗಳು ಹೆಚ್ಚಿ, ಸಂಕಷ್ಟದಲ್ಲಿರುವ ಭಾರತಕ್ಕೆ ತನ್ನಲ್ಲಿನ ಹೆಚ್ಚುವರಿ ಲಸಿಕೆಯನ್ನು ಒದಗಿಸದಿರುವ ಅಧ್ಯಕ್ಷ ಜೋ ಬೈಡನ್ ಆಡಳಿತದ ನಿಲುವಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಮುಖಂಡರೂ ಸೇರಿದಂತೆ ವಿವಿಧ ಕ್ಷೇತ್ರಗಳ ನಾಯಕರು ಬೈಡನ್ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕೋವಿಡ್–19 ವಿರುದ್ಧ ಹೋರಾಡುತ್ತಿರುವ ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೆ ಅಸ್ಟ್ರಾಜೆನೆಕಾ ಕಂಪನಿಯ ಲಸಿಕೆಯನ್ನು ನೀಡಬೇಕು’ ಎಂದು ಭಾರತೀಯ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.
’ಭಾರತ ಹಾಗೂ ಇತರ ದೇಶಗಳಲ್ಲಿನ ಜನರು ಸಹಾಯಕ್ಕೆ ಎದುರು ನೋಡುತ್ತಿದ್ದಾರೆ. ಅವರು ಅಂಥ ಕಠಿಣ ಪರಿಸ್ಥಿತಿ ಎದುರಿಸುತ್ತಿರುವಾಗ ನಾವು ಲಸಿಕೆಯನ್ನು ಗೋದಾಮುಗಳಲ್ಲಿ ಸಂಗ್ರಹಿಸಿ ಇಡುವುದು ಸರಿಯಲ್ಲ’ ಎಂದೂ ಅವರು ಹೇಳಿದ್ದಾರೆ.
‘ಕಳೆದ ಕೆಲವು ತಿಂಗಳಲ್ಲಿ ಗಳಿಸಿದ್ದ ಒಳ್ಳೆಯ ಹೆಸರನ್ನು ಬೈಡನ್ ಆಡಳಿತ ಈಗ ಕಳೆದುಕೊಳ್ಳುತ್ತಿದೆ’ ಎಂದು ಬ್ರೂಕಿಂಗ್ಸ್ ಇನ್ಸ್ಟಿಟ್ಯೂಟ್ನ ತನ್ವಿ ಮದನ್ ಟ್ವೀಟ್ ಮಾಡಿದ್ದಾರೆ.
‘ಭಾರತದಲ್ಲಿ ನನ್ನ ಕುಟುಂಬದ ಐವರು ಸದಸ್ಯರನ್ನು ಕೋವಿಡ್ನಿಂದಾಗಿ ಕಳೆದುಕೊಂಡಿದ್ದೇನೆ’ ಎಂದು ಬೈಡನ್ ಪರ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದ ಭಾರತೀಯ ಅಮೆರಿಕನ್ ಸೋನಾಲ್ ಶಾ ಹೇಳಿದ್ದಾರೆ.