ವಿಯೆನ್ನಾ: ಗಡಿ ವಿಷಯಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಚೀನಾ ಗಮನಿಸುತ್ತಿಲ್ಲ. ಗಡಿಯಲ್ಲಿನ ವಾಸ್ತವ ಸ್ಥಿತಿಯನ್ನು ಬದಲಿಸಲು ಯತ್ನಿಸುತ್ತಿದೆ. ಅದೇ ಕಾರಣಕ್ಕಾಗಿ ಗಡಿಯಲ್ಲಿ ಬಿಗುವಿನ ಪರಿಸ್ಥಿತಿಯು ನಿರ್ಮಾಣವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಇಲ್ಲಿ ಹೇಳಿದರು.
ಗಡಿಯಲ್ಲಿ ಈಗಿರುವ ಸ್ಥಿತಿ ಬದಲಿಸಬಾರದು ಎಂಬ ಬಗ್ಗೆಯೂ ಒಪ್ಪಂದವಾಗಿದೆ. ಆದರೆ, ಇದನ್ನು ಚೀನಾ ಪಾಲಿಸುತ್ತಿಲ್ಲ ಎಂದು ಆಸ್ಟ್ರೀಯಾದ ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಪ್ರತಿಯಾಗಿ ಚೀನಾ ಕೂಡಾ ಇದೇ ರೀತಿ ಆರೋಪ ಮಾಡಿದರೆ ಎಂಬ ಪ್ರಶ್ನೆಗೆ, ಹಾಗೇ ಹೇಳಲಾಗದು.ಈಗ ಸ್ಯಾಟಲೈಟ್ ಚಿತ್ರಗಳಲ್ಲಿ ಹೆಚ್ಚಿನ ಸ್ಪಷ್ಟತೆಯಿದೆ. ಯಾರು ಮೊದಲಿಗೆ ಗಡಿಯನ್ನು ದಾಟಿದ್ದಾರೆ ಎಂಬ ಬಗ್ಗೆ ಹೆಚ್ಚು ಖಚಿತತೆ ಇದೆ ಎಂದು ಪ್ರತಿಪಾದಿಸಿದರು.