ರಾಮೇಶ್ವರ: ಒಡಿಶಾ ಮೂಲದ ಆರು ವಲಸೆ ಕಾರ್ಮಿಕರು 45 ವರ್ಷದ ಮೀನುಗಾರ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯನ್ನು ಕೊಲೆಗೈದ ಘಟನೆ ತಮಿಳುನಾಡಿನ ರಾಮೇಶ್ವರ ಸಮೀಪದ ವಡಕಾಡು ಮೀನುಗಾರಿಕೆ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಸೀವೀಡ್ಸ್ (ಕಡರ್ಪಾಸಿ) ಸಂಗ್ರಹಿಸಲು ತೆರಳಿದ್ದಸಂತ್ರಸ್ತ ಮಹಿಳೆ ವಾಪಸ್ ಮನೆಗೆ ಬಂದಿರಲಿಲ್ಲ. ಹೀಗಾಗಿ ಕುಟಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ನಡುವೆ ಭಾಗಶಃ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಇಲ್ಲಿನ ಸೀಗಡಿ ಫಾರ್ಮ್ನಲ್ಲಿ ಪತ್ತೆಯಾಗಿದೆ.
ಬಳಿಕ 6 ವಲಸೆ ಕಾರ್ಮಿಕರು ಈ ಕೃತ್ಯ ನಡೆಸಿದ್ದಾರೆಂದು ತಿಳಿದ ಗ್ರಾಮಸ್ಥರು ಆರೋಪಿಗಳನ್ನು ತೀವ್ರವಾಗಿ ಥಳಿಸಿದ್ದಾರೆ. ಸದ್ಯ ಪ್ರಕರಣದ ಆರು ಮಂದಿ ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಸಂತ್ರಸ್ತೆಯ ಕುಟುಂಬಸ್ಥರು ಮತ್ತು ಗ್ರಾಮಸ್ಥರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.