ವಿಶ್ವಸಂಸ್ಥೆ: ಮಿಲಿಟರಿ ದಂಗೆಯಿಂದ ನಲುಗಿರುವ ಮ್ಯಾನ್ಮಾರ್ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರುಸ್ಥಾಪಿಸಿರುವುದು, ಬಂಧನಕ್ಕೆ ಒಳಗಾಗಿರುವ ನಾಯಕರ ಬಿಡುಗಡೆ ನಮ್ಮ ಆದ್ಯತೆಯಾಗಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಾರತ ಪ್ರತಿಪಾದಿಸಿದೆ.
‘ಶಾಂತಿಯುತ ಹಾಗೂ ರಚನಾತ್ಮಕ ಮಾರ್ಗದ ಮೂಲಕ ಮ್ಯಾನ್ಮಾರ್ ತನ್ನ ಆಂತರಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ರಾಯಭಾರಿಯಾಗಿರುವ ಟಿ.ಎಸ್.ತಿರುಮೂರ್ತಿ ಹೇಳಿದರು.
‘ಮ್ಯಾನ್ಮಾರ್ನೊಂದಿಗೆ ಭಾರತ ಭೂ ಹಾಗೂ ಸಾಗರ ಗಡಿಯನ್ನು ಹಂಚಿಕೊಂಡಿದೆ. ಹೀಗಾಗಿ ಈ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡುವುದು ಭಾರತದ ಜವಾಬ್ದಾರಿಯಾಗಿದೆ’ ಎಂದರು.
‘ಮ್ಮಾನ್ಮಾರ್ನಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಹಲವು ದಶಕಗಳ ಹೋರಾಟದ ಫಲವಾಗಿ ಆ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಿದೆ. ಆ ಪ್ರಯತ್ನವನ್ನು ವ್ಯರ್ಥಗೊಳಿಸಬಾರದು’ ಎಂದೂ ಅವರು ಹೇಳಿದರು.