ಹಾಂಗ್ಝೌ: ಋತುರಾಜ್ ಗಾಯಕವಾಡ್ ನಾಯಕತ್ವದ ಭಾರತ ತಂಡವು ಏಷ್ಯನ್ ಕ್ರೀಡಾಕೂಟದ ಟಿ20 ಕ್ರಿಕೆಟ್ ನಲ್ಲಿ ಮಂಗಳವಾರ ಕಣಕ್ಕಿಳಿಯಲಿದೆ.
ಭಾರತ ತಂಡವು ಇಲ್ಲಿ ನಡೆಯಲಿರುವ ಕ್ವಾರ್ಟರ್ಫೈನಲ್ನಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ. ಋತುರಾಜ್ ಹೋದ ವಾರ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಆಡಿದ್ದರು. ಇದೀಗ ತಮ್ಮ ವೃತ್ತಿಜೀವನದ ಚೊಚ್ಚಲ ಏಷ್ಯನ್ ಗೇಮ್ಸ್ನಲ್ಲಿ ಆಡಲಿದ್ದಾರೆ.
ಈಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪದಾರ್ಪಣೆ ಮಾಡಿದ್ದ ತಿಲಕ್ ವರ್ಮಾ, ಯಶಸ್ವಿ ಜೈಸ್ವಾಲ್, ಬೌಲರ್ ಆರ್ಷದೀಪ್ ಸಿಂಗ್, ಆವೇಶ್ ಖಾಣ್, ಆಲ್ರೌಂಡರ್ ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಐಪಿಎಲ್ನಲ್ಲಿ ಮಿಂಚಿದ್ದ ರಿಂಕು ಸಿಂಗ್ ಮತ್ತು ರಾಹುಲ್ ತ್ರಿಪಾಠಿ ಅವರು ತಂಡದಲ್ಲಿದ್ದಾರೆ. ಆದ್ದರಿಂದ ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡವೂ ಆಗಿದೆ.
ಎದುರಾಳಿ ನೇಪಾಳ ತಂಡವು ಅರ್ಹತಾ ಗುಂಪಿನ ಪಂದ್ಯದಲ್ಲಿ ಭರ್ಜರಿಯಾಗಿ ಆಡಿತ್ತು. ಮಂಗೋಲಿಯಾ ಎದುರು ಟಿ20 ಕ್ರಿಕೆಟ್ ಮಾದರಿಯ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿತ್ತು. ಆದರೂ ಭಾರತದ ಆಟಗಾರರಿಗೆ ಇರುವ ಅನುಭವ ನೇಪಾಳದ ಆಟಗಾರರಿಗೆ ಇಲ್ಲ. ಆದರೆ ಕಳೆದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತಕ್ಕೆ ಮುಖಾಮುಖಿಯಾಗಿದ್ದಾಗ ನೇಪಾಳ ಚೆನ್ನಾಗಿ ಆಡಿತ್ತು. ಇಲ್ಲಿಯೂ ಅದೇ ರೀತಿಯಲ್ಲಿ ಪೈಪೋಟಿಯೊಡ್ಡುವ ಉತ್ಸಾಹದಲ್ಲಿದೆ.
ಪಂದ್ಯ ಆರಂಭ: ಬೆಳಿಗ್ಗೆ 6.30
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.