ನೈಪಿತಾವ್: ಮ್ಯಾನ್ಮಾರ್ನ ರಾಜಧಾನಿ ನೈಪಿತಾವ್ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರುಸೋಮವಾರ ಜಲಫಿರಂಗಿ ಪ್ರಯೋಗ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆ. ಅಲ್ಲದೆ ಜಲಫಿರಂಗಿಯಿಂದಾಗಿ ಇಬ್ಬರು ಪ್ರತಿಭಟನಕಾರರು ಪ್ರಜ್ಞೆ ತಪ್ಪಿ ಬಿದ್ದಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೊಂದೆಡೆ ಮ್ಯಾನ್ಮಾರ್ನ ಯಾಂಗೂನ್ ನಗರದಲ್ಲಿಯೂ ಪ್ರತಿಭಟನೆ ತೀವ್ರಗೊಂಡಿದೆ. ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ‘ಮಿಲಿಟರಿ ಆಡಳಿತ ತಿರಸ್ಕರಿಸಿ’, ‘ಮ್ಯಾನ್ಮಾರ್ಕ್ಕಾಗಿ ಹೋರಾಟ’ ಎಂಬ ಘೋಷಣೆಗಳನ್ನು ಹಾಕಿದರು.
ಕಾರ್ಮಿಕರು ಸಹ ರಾಷ್ಟ್ರಾದ್ಯಂತ ಮುಷ್ಕರ ಆರಂಭಿಸಿದ್ದಾರೆ. ಸೇನಾ ಆಡಳಿತವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವವನ್ನು ಪುನರ್ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಭಾನುವಾರದಿಂದ ಸೋಮವಾರ ಬೆಳಿಗ್ಗೆ ವೇಳೆಗೆ ಪ್ರತಿಭಟನಕಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ‘ಮ್ಯಾನ್ಮಾರ್ನ ಹಿರಿಯ ನಾಯಕಿ ಆಂಗ್ ಸಾನ್ ಸೂಕಿ ಮತ್ತು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್ಡಿ) ಪಕ್ಷದ ಇತರ ನಾಯಕರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.
ಮ್ಯಾನ್ಮಾರ್ನಲ್ಲಿ ಐದು ದಶಕಗಳಿಂದ ಮಿಲಿಟರಿ ಆಡಳಿತವಿತ್ತು. ಆದರೆ, 2012ರಿಂದ ದೇಶದಲ್ಲಿ ಮಿಲಿಟರಿ ಹಿಡಿತ ಕಡಿಮೆಯಾಗುತ್ತಾ ಬಂತು. 2015ರಲ್ಲಿ ಸಾನ್ ಸೂಕಿ ಅವರ ಪಕ್ಷವು ಗೆದ್ದು, ಮ್ಯಾನ್ಮಾರ್ನಲ್ಲಿ ಸರ್ಕಾರವನ್ನು ರಚಿಸಿತು.