ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈವಿಕ ಶಿಲೀಂಧ್ರ ಕೀಟನಾಶಕ ‘ಬೆವರಿಯಾ ಬೆಸ್ಸಿಯಾನಾ’ಗೆ ರೈತರಿಂದ ಹೆಚ್ಚಿದ ಬೇಡಿಕೆ

ರಾಯಚೂರು ಕೃಷಿ ವಿಜ್ಞಾನಗಳ ವಿವಿಯಿಂದ ಜೈವಿಕ ಕೀಟನಾಶಕ ತಯಾರಿಕೆ
Last Updated 25 ನವೆಂಬರ್ 2022, 19:30 IST
ಅಕ್ಷರ ಗಾತ್ರ

ರಾಯಚೂರು: ಮೆಣಸಿನಕಾಯಿ ಬೆಳೆಗೆ ಎರಡು ವರ್ಷಗಳಿಂದ ಕಂಟಕವಾಗಿರುವ ಕಪ್ಪು ನುಶಿ (ಬ್ಲ್ಯಾಕ್ ಥ್ರಿಪ್ಸ್‌) ಬಾಧೆ ನಿಯಂತ್ರಿಸಲು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜೈವಿಕ ಕೀಟ ನಿಯಂತ್ರಣ ವಿಭಾಗವು ಸಿದ್ಧಪಡಿಸಿದ ‘ಬೆವೆರಿಯಾ ಬೆಸ್ಸಿಯಾನಾ’ ಜೈವಿಕ ಶಿಲೀಂಧ್ರ ಕೀಟನಾಶಕಕ್ಕೆ ರೈತರಿಂದ ಬೇಡಿಕೆ ಹೆಚ್ಚಳವಾಗಿದೆ.

ಕೀಟನಾಶಕ ಪುಡಿ ಇರುವ ಪೊಟ್ಟಣ ಪಡೆಯಲು ಮೆಣಸಿನಕಾಯಿ ಬೆಳೆಯುವ ರೈತರು ರಾಯಚೂರು ಕೃಷಿ ವಿಶ್ವವಿದ್ಯಾಲಯವನ್ನು ಹುಡುಕಿ ಬರುತ್ತಿದ್ದಾರೆ. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬರುತ್ತಿರುವ ರೈತರು ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಸೇರಿದಂತೆ ದೂರದ ಜಿಲ್ಲೆಗಳಿಂದಲೂ ಧಾವಿಸುತ್ತಿದ್ದಾರೆ. ರೈತರ ಬೇಡಿಕೆಗೆ ತಕ್ಕಂತೆ ಜೈವಿಕ ಕೀಟನಾಶಕ ಒದಗಿಸುವುದು ಅಸಾಧ್ಯವಾಗಿ ಪರಿಣಮಿಸಿದೆ.

ಹೀಗಾಗಿ ಜೈವಿಕ ಕೀಟ ನಿಯಂತ್ರಣ ವಿಭಾಗಕ್ಕೆ ಬರುವ ರೈತರು, ಮತ್ತೆ ಬರಬೇಕಾದ ದಿನ ನಿಗದಿಗೊಳಿಸಿ ಟೋಕನ್‌ ನೀಡುವ ವ್ಯವಸ್ಥೆ ಮಾಡಲಾಗಿದೆ. ಬೆವೆರಿಯಾ ಬೆಸ್ಸಿಯಾನಾ ಸಿದ್ಧವಾಗುತ್ತಿದ್ದಂತೆಯೆ ಸರದಿಪ್ರಕಾರ ರೈತರಿಗೆ ಹಸ್ತಾಂತರಿಸಲಾಗುತ್ತಿದೆ. ಸದ್ಯ ಪ್ರತಿ 15 ದಿನಗಳಿಗೆ ಒಂದು ಟನ್‌ ಕೀಟನಾಶಕ ಸಿದ್ಧಪಡಿಸಿ ಒದಗಿಸಲಾಗುತ್ತಿದೆ..

‘ಬೆವೆರಿಯಾ ಬೆಸ್ಸಿಯಾನಾ ಕೀಟನಾಶಕಕ್ಕೆ ರೈತರಿಂದ ಬಹಳ ಬೇಡಿಕೆ ಇದ್ದು, ಈ ವರ್ಷ ಇದುವರೆಗೂ ಸುಮಾರು ಐದು ಟನ್‌ ಸಿದ್ಧಪಡಿಸಿ ಕೊಡಲಾಗಿದೆ. ಈ ಕೀಟನಾಶಕವು ಸಿದ್ಧವಾಗುವುದಕ್ಕೆ 15 ದಿನಗಳು ಕಾಯಬೇಕಾಗುತ್ತದೆ. ಹೀಗಾಗಿ ಬೇಡಿಕೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ’ ಎಂದು ಜೈವಿಕ ಕೀಟ ನಿಯಂತ್ರಣ ವಿಭಾಗದ ಮುಖ್ಯಸ್ಥ ಡಾ.ಅರುಣಕುಮಾರ್‌ ಹೊಸಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸಾಯನಿಕ ಕೀಟನಾಶಕಗಿಂತಲೂ ಜೈವಿಕವಾದ ಬೆವೆರಿಯಾ ಬೆಸ್ಸಿಯಾನಾ ಸಿಂಪರಣೆಯಿಂದ ಶೇ 50 ರಿಂದ ಶೇ 60 ರಷ್ಟು ಕೀಟಬಾಧೆ ಹತೋಟಿಗೆ ಬಂದಿದೆ ಎಂದು ರೈತರು ಹೇಳುತ್ತಿದ್ದಾರೆ. ಇದರಿಂದ ಬೆಳೆಗೆ ಯಾವುದೇ ದುಷ್ಪರಿಣಾಮ ಇರುವುದಿಲ್ಲ. ಈ ಕಾರಣಕ್ಕಾಗಿಯೆ ಮೆಣಸಿನಕಾಯಿ ಬೆಳೆಗಾರರೆಲ್ಲ ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದಾರೆ‘ ಎಂದರು.

’ಒಂದು ಲೀಟರ್‌ ನೀರಿನಲ್ಲಿ 4 ರಿಂದ 5 ಗ್ರಾಂ ಬೆವೆರಿಯಾ ಬೆಸ್ಸಿಯಾನಾ ಮಿಶ್ರಣ ಮಾಡಿಕೊಂಡು ಸಿಂಪರಣೆ ಮಾಡಬೇಕು. ಮೆಣಸಿನಕಾಯಿ ಬೆಳೆಯ ಮೇಲ್ಭಾಗದಲ್ಲಿ ಸರಿಯಾಗಿ ಸಿಂಪರಣೆ ಮಾಡುವುದರಿಂದ ಬ್ಲ್ಯಾಕ್‌ ಥ್ರಿಪ್ಸ್‌ ನಿಯಂತ್ರಣಕ್ಕೆ ಬರುತ್ತದೆ. ಹೂವುಗಳು ಒಣಗಿಕೊಂಡು ಉದುರುವುದು ತಪ್ಪುತ್ತದೆ‘ ಎಂದು ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಜ್ಞಾನಿ ಡಾ.ಜಿ.ಎನ್‌.ಶ್ರೀವಾಣಿ ತಿಳಿಸಿದರು.

ಬೆವರಿಯಾ ಬೆಸ್ಸಿಯಾನಾ ಜೈವಿಕ ಕೀಟನಾಶಕ ಒಂದು ಕೆಜಿ ಪೊಟ್ಟಣವು ಒಂದು ಎಕರೆಗೆ ಸಿಂಪರಣೆ ಮಾಡುವುದಕ್ಕೆ ಸಾಕಾಗುತ್ತದೆ. ಒಂದು ಕೆಜಿ ಪೊಟ್ಟಣಕ್ಕೆ ₹150 ದರ ನಿಗದಿ ಮಾಡಲಾಗಿದೆ.
– ಡಾ.ಅರುಣಕುಮಾರ್‌ ಹೊಸಮನಿ, ರಾಯಚೂರು ಕೃಷಿ ವಿವಿ, ಜೈವಿಕ ಕೀಟ ನಿಯಂತ್ರಣ ವಿಭಾಗದ ಮುಖ್ಯಸ್ಥ

ಮೆಣಸಿನಕಾಯಿ ಹೂವಿನಲ್ಲಿ ಜಿರಗಿಗಿಂತ ಸಣ್ಣದಾದ ಕಪ್ಪು ಹುಳುಗಳು ಆಗಿವೆ. ಹೂವು ಉದುರಿ ಉತ್ಪನ್ನ ಕಡಿಮೆಯಾಗುತ್ತಿದೆ. ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕೊಡುವ ಕೀಟನಾಶಕದಿಂದ ಅದು ನಿಯಂತ್ರಣಕ್ಕೆ ಬರುತ್ತದೆ.
– ಶಂಕರಪ್ಪ, ಕಲ್ಲೂರು ಗ್ರಾಮದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT