ತೋವಿನಕೆರೆ: ಉಪಗ್ರಹ ಆಧಾರಿತ ಮಣ್ಣು ಪರೀಕ್ಷೆಯನ್ನು ರೈತರ ಜಮೀನಿನಲ್ಲಿ ನಡೆಸಿ 2 ನಿಮಿಷಗಳಲ್ಲಿ ಪೋಷಕಾಂಶಗಳ ಫಲಿತಾಂಶ ಪಡೆಯಲಾಯಿತು.
ಸ್ಕ್ಯಾಲೊ ಟೆಕ್ನಾಲಜಿ ಸಂಸ್ಥೆಯು ಕೃಷಿ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಪರೀಕ್ಷೆ ನಡೆಸಿತು. ಕೃಷಿ ಜಮೀನಿನಲ್ಲಿ ನೆಲಕ್ಕೆ ಸೆನ್ಸಾರ್ ಚುಚ್ಚಿ ಉಪಗ್ರಹಕ್ಕೆ ಸಂಪರ್ಕ ಮಾಡಿದರು. ಸೆನ್ಸಾರ್ ಮೂಲಕ ಮಣ್ಣಿನ ಗುಣ ಲಕ್ಷಣಗಳು ಉಪಗ್ರಹ ಸಂಪರ್ಕಕ್ಕೆ ಸಿಕ್ಕ ಎರಡು ನಿಮಿಷಗಳಲ್ಲಿ ಪೋಷಕಾಂಶಗಳ ಫಲಿತಾಂಶ ಮೊದಲೇ ದಾಖಲಿಸಿದ್ದ ಮೊಬೈಲ್ ಸಂಖ್ಯೆಗೆ ಬಂತು.
ಕೃಷಿ ಇಲಾಖೆ ಮತ್ತು ಸ್ಕ್ಯಾಲೊ ಕಂಪನಿಯವರು ಅದೇ ಸ್ಥಳದಲ್ಲಿ ಮಣ್ಣನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಲು ಸಂಗ್ರಹ ಮಾಡಿದರು.
‘ಉಪಗ್ರಹ ಮತ್ತು ಪ್ರಯೋಗಾಲಯದಲ್ಲಿ ಮಾಡಿಸಿದ ಎರಡೂ ಫಲಿತಾಂಶ ಒಂದೇ ಆಗಿರಬೇಕು. ಆಗ ಉಪಗ್ರಹ ಆಧಾರಿತ ಮಣ್ಣು ಪರೀಕ್ಷೆ ಯಶಸ್ವಿ ಆಗಲಿದೆ. ಕೃಷಿ ಇಲಾಖೆಯಿಂದ ಅನೇಕ ಉತ್ತಮವಾದ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಅಳವಡಿಸಿಕೊಳ್ಳಲಾಗುವುದು’ ಎಂದು ಸ್ಕ್ಯಾಲೊ ಸಂಸ್ಥೆಯ ದಕ್ಷಿಣ ಏಷ್ಯಾದ ನಿರ್ದೇಶಕ ಮಹಾಂತೇಶ್ ಪಾಟೀಲ್ ತಿಳಿಸಿದರು.
‘ಈಗ ರೂಪಿಸಿರುವ ಸೆನ್ಸರ್ ಅನ್ನು ಉದ್ದ ಮಾಡುವುದು, ಸಾವಯವ ಇಂಗಾಲದ ಫಲಿತಾಂಶ ತೋರಿಸುವುದು, ಒಂದೇ ಸರ್ವೆ ನಂಬರ್ ಜಮೀನಿನಲ್ಲಿ ಹಲವು ಕಡೆ ಪರೀಕ್ಷೆ ನಡೆಸಿ ಸರಾಸರಿ ಫಲಿತಾಂಶ ತೆಗೆದರೆ ಉತ್ತಮ’ ಎನ್ನುವುದು ಸೇರಿದಂತೆ ಹಲವು ಸಲಹೆಗಳನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಎನ್.ದೇವರಾಜು ನೀಡಿದರು.
ಕೃಷಿ ಅಧಿಕಾರಿ ನರಸಿಂಹಮೂರ್ತಿ, ಸಂಸ್ಥೆಯ ಅರವಿಂದ್, ಕೃಷಿ ಇಲಾಖೆಯ ಅವಿನಾಶ್, ರವಿಕುಮಾರ್, ಚಿಕ್ಕಹನು ಮಂತಯ್ಯ, ರೈತರಾದ ಶ್ರೀಕಂಠಪ್ಪ, ರಾಮನಾಯ್ಕ, ತುಳಸಾರಾಮ್, ಜಮೀನುಗಳ ಮಾಲೀಕರು ಹಾಜರಿದ್ದರು.